ಕವಿತೆ ಕೊಳಲನೊಮ್ಮೆ ಊದು... 21.6.15
ನವಿಲುಗರಿ ನಡುವಲ್ಲಿ ಇದೆಂಥ ಆಟವೋ ಕೃಷ್ಣ
ತತ್ತರಿಸಿ, ಒತ್ತರಿಸಿ, ಉಮ್ಮಳಿಸಿ ನಡುಗಿಹುದು ಎದೆ ನೋಡು
ಇದು ನಿನ್ನ ಕಾಲವಲ್ಲ ಮುತ್ತಿ ಮುತ್ತಿಕ್ಕಿ ಬೆಣ್ಣೆಯೂಡಿಸಲು...
ಇದು ನಿನ್ನ ಕಾಲವಲ್ಲ ಮುತ್ತಿಕ್ಕಿದರೂ ಮುಕ್ತಿಪಥದಲಿ ಮೇಲೇರಲು, ನೆಮ್ಮದಿಯಲಿ
ತೋಳಲೊರಗಿ ಸುಖಿಸಲು....
ಇಲ್ಲೂ ಇದ್ದೀವಿ ರಾಧೆಯರು, ಗೋಪಿಕೆಯರು ಮನೆಮನೆಯಲ್ಲಿ, ಗಲ್ಲಿಗಲ್ಲಿಯಲಿ...
ಇಲ್ಲಿಯೂ ಇದೆ ಗೋಕುಲ, ನದಿ, ಬೃಂದಾವನ, ಗೋವು ಎಲ್ಲವೆಲ್ಲ. ಆದರೇನು...?
ಗೋವುಗಳು ಗೋವುಗಳಲ್ಲ, ಗೋಮುಖದ ವ್ಯಾಘ್ರಗಳು...
ನದಿಯೆಲ್ಲ ಯಮುನೆಯಲ್ಲ, ನದಿಯೊಳಗೆ ನೆತ್ತರಿದೆ....
ಬೃಂದಾವನದಲ್ಲಿ ರಾಧೆಯೀಗ ಒಂಟಿಯಲ್ಲ, ಕಾಯುವಾ ತಪದಲ್ಲಿ ಅವಳಿಗೀಗ ನಂಬಿಕೆಯಿಲ್ಲ....
ನೀನವಳ ವಿರಹಿಯಾಗಿಸಿದೆಯಲ್ಲವೇ ನಿರಂತರ...
ಸಿಕ್ಕಂತೆ, ಸಿಗದಂತೆ ಕಾಡಿಸಿದೆಯಲ್ಲವೇ ಗೋಪಿಕೆಯರ ಹಸಿಹಸಿಹೃದಯಗಳ...
ಮೋಹನರಾಗದಲಿ ಈ ಮಾನಿನಿಯರ ಆಟವಾಡಿಸಿಬಿಟ್ಟೆಯಲ್ಲವೇ...
ಎಷ್ಟೆಂದು ತಪಿಸಿಯಾರು ಮೊಗದೋರದಾ ಚೆಲುವಂಗೆ..?
ಎಷ್ಟೆಂದು ದಹಿಸಿಯಾರು ನಿತ್ಯ ಕಾಮಮರ್ದನವ..?
ಎದೆಯ ಕಣ್ಣೀರಿಗೆ, ಕುದಿಗೆ ಆಸರೆಯಾಗಿ ಒರಗಲೊಂದು ಭುಜವಿಲ್ಲದೆ, ಎದೆಯಿಲ್ಲದೆ
ಎಷ್ಟೆಂದು ಬಾಗುವಾ ಕಾಯವ ನೆಟ್ಟಗಿಟ್ಟಾರು..?
ಇತಿಹಾಸ, ಪುರಾಣ ಕಣ್ಣೆದುರಿಗಿದೆ. ಸೀತೆ ಕಾಡುಪಾಲಾಗಿದ್ದು, ಅಹಲ್ಯೆ ಕಲ್ಲಾದದ್ದು, ಮಂಡೋದರಿ- ಕನಲಿದ್ದು, ಯಶೋಧರೆ ತಪಿಸಿದ್ದು...ಅಯ್ಯೋ ಹೆಣ್ಣ ಸಂಕಟ, ಕುದಿಯೇ...!
'ನಾವು ಈ ಎಲ್ಲರಂತಲ್ಲ, ನಮ್ಮ ಆದರ್ಶ ಇಲ್ಲಿದೆ' ಎನ್ನುತ್ತ,
ಸಿಡಿಯುತ್ತಿದ್ದಾರೆ ಅಂಬೆಯಂತೆ,
ಕುದಿಯುತ್ತಿದ್ದಾರೆ ಜ್ವಾಲೆಯಂತೆ,
ಆದರೆ, ಆದರೆ....
ಸೇಡು ಹೊಸೆಯಲು ಹೊರಟು ಹೊಸ್ತಿಲ ದಾಟುವಾತುರದಲ್ಲಿ ಎಡವುತ್ತಿದ್ದಾರೆ...
ಯಮುನೆಯೊಳಗೆ ಇಳಿಯುತಿದ್ದಾರೆ,
ಕಾಳಿಂದೀಮಡುವಲ್ಲಿ ಧುಮುಕುತಿದ್ದಾರೆ,
ಮಂಗಳಸೂತ್ರಕೆ ಮಂಗಳ ಹಾಡುತಿದ್ದಾರೆ,
ನಿನ್ನಂತೆ ಹತ್ತುಕೃಷ್ಣರ ಹುಡುಕುತ್ತಿದ್ದಾರೆ,
ಕೀಚಕ, ರಾವಣ, ದುಶ್ಯಾಸನರ ನಂಬುತ್ತಿದ್ದಾರೆ,
ಸೀರೆಸೆಳೆವ ಕೈಗೆ ತಾವಾಗೇ ಚುಂಗು ನೀಡುತ್ತಿದ್ದಾರೆ,
ಮತ್ತೀಗ, ನೂರು ತೆರನ ಹಾಡು, ಪಾಡು, ಸಂಕಟ...!
ನೀನೊಂದು ರೀತಿಯಲಿ ಕಾಡಿದೆ,
ಮತ್ತಿವರು ಮತ್ತೆ ಹತ್ತುಹಲವು ರೀತಿಯಲಿ....!
ಮೇಲೇಳುವುದು ದುಸ್ತರವೋ ಕೃಷ್ಣಾ......
ಅಯ್ಯೋ, ನೀರೆಯರು ಜಾರುತ್ತಿದ್ದಾರೆ, ಉರಿವ ನಾಲಿಗೆಯೆದುರು ಉದುರುವಾ ಪತಂಗವಾಗುತ್ತಿದ್ದಾರೆ..
ದ್ವಾಪರದ ಯುಗವಲ್ಲವೋ ಕೃಷ್ಣಾ ಇದು, ಆಧ್ಯಾತ್ಮಬಂಧುವಾಗಲು...!
ತ್ರೇತೆಯಲ್ಲವೋ ಕೃಷ್ಣಾ ಇದು, ಕಾಡು, ಬೆಂಕಿ, ಪಾತಾಳಕೆ ಆಹಾರವಾಗಲು...!
ಕಳ್ಳಕೃಷ್ಣರಿಗೆ ಬುದ್ಧಿಕೊಡು ಹುಸಿಗೊಳಲನೂದಿ ಕಾಡದಂತೆ,
ಹೆಣ್ಣಿಗೆ ಅಭಯವರ ನೀಡು ಜಾರದಂತೆ,
ಊದು ಸ್ವಚ್ಛಬಿದಿರಕೊಳಲನೊಮ್ಮೆ, ಮನಗಳ ಮಲಿನ ಕಳೆವಂತೆ.
ನಾವು ಹಸಿರಾಗಬೇಕು...
ಜಗಸೃಷ್ಟಿಯ ಉಸಿರಾಗಬೇಕು....
* * * *
ಎಸ್. ಪಿ. ವಿಜಯಲಕ್ಷ್ಮಿ
ಫ್ಲಾಟ್ ನಂ.305, ಚಾರ್ಟರ್ಡಮಡಿ
ಮೊ....9980712738
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ