ಗುರುವಾರ, ಜುಲೈ 16, 2015

ಹೀಗೊಬ್ಬ ರಾಮಾಚಾರಿ


ಹೀಗೊಬ್ಬ ರಾಮಾಚಾರಿ ಕಥೆ    3. 7. 2015

' ಏ ಸರೂ ', ಕಿವಿಗೆ ಬಿದ್ದ ಆ ದನಿ ಇಡೀ ದೇಹವನ್ನು ಚಕ್ಕನೆ ವ್ಯಾಪಿಸಿಬಿಟ್ಟಿತು . ಅಡಿಯಿಂದ ಮುಡಿಯವರೆಗಿನ ನರಗಳನ್ನು ನವಿರುಕಂಪನದಲ್ಲಿ ಮೆಲ್ಲಗೆ ಅಲ್ಲಾಡಿಸಿತು . 'ಇದು ಅವನದೇ ದನಿ ', ಗಕ್ಕನೆ ತಿರುಗಿದೆ . ಅರೆಕ್ಷಣ ಗೊಂದಲವಾಯಿತು . 'ಏಯ್ ಗೊತ್ತಾಗ್ಲಿಲ್ಲೇನೆ ....' ಕೈ ನೀಡಿದ . ' ಅರೇ ಕೃಷ್ಣ ' , ಕೈಹಿಡಿದೆ  ತುಂಬಾ ಆತ್ಮೀಯತೆಯಿಂದ. ನಿಮಿಷಗಳ ನೋಟಕ್ಕೆ ಸಿಕ್ಕವನನ್ನು ಅಳೆಯುತ್ತ ಹೋದೆ .......
    * * * *
ನಾನು ಹೀಗೆಂದುಕೊಂಡಿದ್ದು ಅದೆಷ್ಟುಬಾರಿಯೋ ನೆನಪಿಲ್ಲ ಬಿಡಿ .ಇವನು ನಿಜಕ್ಕೂ ರಾಮಾಚಾರಿಯೇ.
ರಾಮಾಚಾರಿ ಯಾರೆಂದು ನಿಮಗೂ ಗೊತ್ತಿದೆ . ಇವನು ರಾಮಾಚಾರಿ ಅಂತ ನಾನಂದುಕೊಳ್ಳಲು ಶುರುಮಾಡಿದ್ದು  ನಾಗರಹಾವು ಸಿನಿಮಾ ಬಂದಮೇಲೆಯೇ . ಅದೆಷ್ಟೋಬಾರಿ ನಾನು ಯೋಚಿಸಿದ್ದುಂಟು ಇವನನ್ನು ನೋಡಿಯೇ ಆ ಪಾತ್ರ ಸೃಷ್ಟಿಯಾಯಿತೇ ಅಥವಾ ಕಲ್ಪನೆಯೇ  ಎಂದು . ಕಲ್ಪನೆಯಂತೂ ಇರಲಾರದು . ಇಂಥವರು ಇರಬಹುದು ಈ ವಿಶಾಲಜಗತ್ತಿನ ಅದೆಷ್ಟೋ ಕಡೆಯಲ್ಲಿ ಅದೆಷ್ಟೋಮಂದಿ . ಆದರೆ ಇವನನ್ನೇ ನೋಡಿ ಬರೆದರೇ ಎನ್ನುವ ನನ್ನ ಯೋಚನೆಯಲ್ಲಿ ಹುರುಳೇನಿಲ್ಲ .   ನನ್ನ ಕಣ್ಣಿಗೆ ಬಿದ್ದ ಇವನು      ಆ ಲೇಖಕರ ಕಣ್ಣಿಗೆ ಬೀಳಲು ಸಾಧ್ಯವಿಲ್ಲ .ಕಾರಣ ಇವ ನನ್ನೂರಿನವನು ಲೇಖಕರು ಬೇರೆ ಊರಿನವರು . ಅವರಿಗೂ ಇಂಥವನೊಬ್ಬ ಎಲ್ಲಿಯೋ ಕಂಡಿದ್ದಾನೆ ಎನ್ನುವುದೇ ಸರಿ . ಹೀಗೆ ಕಂಡಾಗ ಆ ಪಾತ್ರ ಸೃಷ್ಟಿಯಾಗಿದೆ , ತೆರೆಯಮೇಲೂ ಬಂದಿದೆ. ಓದಿದ , ನೋಡಿದ ಜನ ತಮ್ಮ ಆಸುಪಾಸಿನಲ್ಲಿ ಇಂಥ ಸಾಮ್ಯತೆಯ ವ್ಯಕ್ತಿ ಇದ್ದಾಗ ' ಓ, ಇವನನ್ನೇ ನೋಡಿ ಬರೆದಿರಬೇಕು , ಇವನೇ ರಾಮಾಚಾರಿ ' ಅಂದುಕೊಳ್ಳುವುದಿಲ್ಲವೇ ,ಬಹುಷಃ ನಾನೂ ಹೀಗಿರಬಹುದು . ಅದೇನೇ ಇರಲಿ ನನ್ನ ಬಾಲ್ಯ , ಹರಯದ ಅದೆಷ್ಟೋಕಾಲ ನಮ್ಮೊಡನಾಡಿದ ಈ 'ತರಲೆ ಕೃಷ್ಣ ' ಮುಂದೆ ನಾನು ನಾಗರಹಾವು ಸಿನಿಮಾ ನೋಡಿಬಂದಮೇಲೆ ರಾಮಾಚಾರಿಯಾಗಿ ನನ್ನ ಮನದಂಗಳದಲ್ಲಿ ಸುಳಿಯುತ್ತಲೇ ಇದ್ದಾನೆ . ಅಂದರೆ ಈ ಸಿನಿಮಾ ಬರುವಮುಂಚೆಯೇ ಈ ಕೃಷ್ಣ ಥೇಟ್ ರಾಮಾಚಾರಿಯಂಥ ಕ್ಯಾರೆಕ್ಟರ್ ಆಗಿ ನನ್ನೂರಲ್ಲಿ 'ಸುಪ್ರಸಿಧ'್ಧನೇ ಆಗಿದ್ದ, ಹೀಗೆಂದರೆ ಸರಿಯಾದೀತೋ ಇಲ್ಲವೋ ,ಯಾಕೆಂದರೆ ಹಲವರ ಪಾಲಿಗೆ ಇವನು ಕುಪ್ರಸಿಧ್ಧ .

ಇವನು ಒಂದುರೀತಿಯಲ್ಲಿ ಸುಂದರಾಂಗನೂ ಹೌದು . ಆಜಾನುಬಾಹು ಅಲ್ಲದಿದ್ದರೂ ಐದುಅಡಿ, ಎಂಟುಇಂಚು ಎತ್ತರದ , ಕೆಂಪನೆಯ , ಬೇಕೆಂದಾಗ ತಿರುವಲು ಬರುವಂಥ ಕೊಂಚಹುರಿಮೀಸೆಯ 'ಆಂಗ್ರಿ -
ಯಂಗ್ ಮ್ಯಾನ್ ' ಲುಕ್ಕು . ಓಡಾಡುವ ಶೈಲಿಯೋ 'ಡೋಂಟ್ ಕೇರ್ ' ನಡಿಗೆ . ಎದೆಸೆಟೆಸಿ , ತೋಳುಗಳ  ಬೀಸಿ ಬೀದಿಯಲ್ಲಿ ನಡೆವಾಗ ಬಹುಮಂದಿಗೆ ಇವನೊಬ್ಬ ಮದಿಸಿದ ಗಜದಂತೆ ಕಾಣುತ್ತಿದ್ದ. ನಕ್ಕರಂತೂ ಎದಿರುಬರುವ ಹರಯದ ಹುಡುಗಿಯರು ಒಂಥರಾ ಔಟ್. ಆದರೆ ಸಣ್ಣ ಊರಾದ್ದರಿಂದ , ಮನೆಮನೆಯಲ್ಲಿ ಸಂಪ್ರದಾಯದ ನಡವಳಿಕೆಯ ಲಕ್ಷ್ಮಣರೇಖೆಯ ದೇಖರೇಖಿಯಲ್ಲಿ ಬೆಳೆಯುತ್ತಿದ್ದುದರಿಂದ ಔಟಾಗುತ್ತಿದ್ದ ಹುಡುಗಿಯರು ಬಹಳಕಡಿಮೆ . ಇನ್ನು ಭಯ, ಹೆದರಿಕೆ, ಹಿಂಜರಿಕೆ, ಸಂಕೋಚ, ನಾಚಿಕೆ, ಮುಲಾಜು ಊಹ್ಞೂ , ಇಂಥ ಸಾತ್ವಿಕ ಗುಣಗಳು ಯಾವುವೂ ಇವನ ಹತ್ತಿರ ಸುಳಿದಿದ್ದೇ ಇಲ್ಲ. ಎಲ್ಲೆಂದರಲ್ಲಿ, ಹೇಗೆಂದರಲ್ಲಿ, ಯಾವಾಗೆಂದರಲ್ಲಿ ಏನೇನೋ ಕಾರಣಗಳಿಗಾಗಿ  ಹಿಂದೆಮುಂದೆ ನೋಡದೆ  ಧುಮುಕುವ ಇವನರೀತಿಗೆ ಇವನೊಂಥರಾ 'ಒರಟ'ನಾಗೇ ಎಲ್ಲರ ಕೆಂಗಣ್ಣಿಗೂ ಬೀಳುತ್ತಿದ್ದ. ಹರಯ ದೇಹದ ನರನಾಡಿಗಳಲ್ಲೆಲ್ಲಾ ಬಿಸಿಬಿಸಿಯಾಗಿ ಪ್ರವಹಿಸುತ್ತಿದ್ದ ಸುಂದರ ವಸಂತಕಾಲ ,ಆಗಾಗ ಒಂದಿಷ್ಟು ಪೋಲೀಸ್ವಭಾವವೂ ಬಿಚ್ಚುತ್ತಿದ್ದುದನ್ನು ಕಂಡವರು ,
    'ಹಾಳಾದವನು ಅಪಾಪೋಲಿ . ಯಾರೂ ಅವನಜೊತೆ ಸೇರ್‍ಬೇಡಿ . ಇನ್ನು ಹೆಸರೋ ಶ್ರೀ.....ಕ್ರಿಷ್ಣ 'ಎಂದು
ಮಡಿವಂತರು ವ್ಯಂಗ್ಯವಾಗಿ ಬೈದು ಶಾಪಹಾಕುತ್ತಿದ್ದುದುಂಟು. ಈ ಶಾಪಗಳೆಲ್ಲಾ ಈ ಒರಟನ ಕಿವಿಯ ತೂತನ್ನೇನೋ ಹೊಗುತ್ತಿದ್ದವು . ಆದರೇನು, ಇಲ್ಲೂ ಇವನ ಡೋಂಟ್‍ಕೇರ್  ಬುಧ್ಧಿಕೆಲಸಮಾಡುತ್ತಿತ್ತು .
ಹರಯದ ಹೆಗ್ಗುರುತಾದ ಆ ಹುರಿಮೀಸೆಯನ್ನು ಮೆಲ್ಲಗೊಮ್ಮೆ ತಿರುವಿ, ತಣ್ಣಗೆನಕ್ಕು ನಡೆದುಬಿಡುತ್ತಿದ್ದ ಈ ಹಾಳಾದವನು. ಪಾಪ, ಆ ಶ್ರೀಕೃಷ್ಣನೇ ತನ್ನಹೆಸರು ಈರೀತಿ ಅಪಾರ್ಥಕ್ಕೆಡೆಮಾಡಿಕೊಟ್ಟು , ದುರ್ಬಳಕೆಯಾಗಿದ್ದಕ್ಕೆ ಅದೆಷ್ಟು ನೊಂದುಕೊಳ್ಳುತ್ತಿದ್ದನೋ ಅದಕ್ಕೇ ಇರಬೇಕು ಈ ಕೃಷ್ಣ ಒಮ್ಮೆಕೂಡ ದೇವಸ್ಥಾನದ ಒಳಗೆ ಬಿಜಯಂಗೈಯುತ್ತಲೇ ಇರಲಿಲ್ಲ . ಒಟ್ಟಿನಲ್ಲಿ ನನ್ನೂರಿಗೆ  ನಾರ್ಮಲ್ ಅಲ್ಲದ ಯದ್ವಾತದ್ವಾ ಎಡಬಿಡಂಗಿತನದ
ಇವನನ್ನು ಸಂಪ್ರದಾಯಸ್ಥರ ಮಕ್ಕಳು, ಪೋಷಕರಿಗೆ ಹೆದರಿ ಹೆಚ್ಚಿನ ದೋಸ್ತಿ ಮಾಡಿಕೊಳ್ಳಲು ಮುಂದೆಬರದ ಕಾರಣಕ್ಕೋ ಏನೋ ಇವನು ಇಲ್ಲೂ ಎಡಬಿಡಂಗಿ ವರ್ತನೆ ತೋರಿಸಿಯೇಬಿಟ್ಟ . ಬಷೀರ , ಬಾಷ , ವರ್ಗೀಸ್ , ಕುರಿಯನ್ , ನಿಂಗ ,ಮಾದ ಎಲ್ಲರೂ ಇವನ ಬೆನ್ನಿಗಂಟಿಕೊಂಡವರೇ .' ಆ- ಈ' ಧರ್ಮಸ್ಥರ ನಡುವೆ ಒಂದು ಅಂತರ ಈ ಊರಿನಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವಾಗ ಇವನುಮಾತ್ರ ಎಲ್ಲವನ್ನೂ ಗಾಳಿಗೆ ತೂರಿ 'ಜೈ'ಎಂದೇಬಿಟ್ಟಿದ್ದ . ಎಲ್ಲರಮನೆಗೂ ನುಗ್ಗಿ ಕವಳಕತ್ತರಿಸಿ ಬರುವ ಇವನಿಗೆ ಅದೆಷ್ಟೋಮಂದಿ ಎದುರಿಗೇ ಸಹಸ್ರನಾಮಾವಳಿ ಮಾಡುತ್ತಿದ್ದುದೂ ಉಂಟು . ಮತ್ತೆ, ಈ ಹಿಂದೆ ಹೇಳಿದಂತೆ ಹುರಿಮೀಸೆಯ ಮೇಲೆ ಕೈಯ್ಯಾಡಿಸಿ ತಣ್ಣಗೆನಕ್ಕು ನಡೆದುಬಿಡುವ ಇವನ ಪರಿಗೆ ನನ್ನಲ್ಲೊಂದು ವಿಸ್ಮಯ ಬಹುಷಃ ಈ ಘಟ್ಟದಲ್ಲೇ ಹುಟ್ಟಿದ್ದಿರಬಹುದು .  
              'ಥೂ , ಎಂತದೋ ಇದು . ಮಡಿಮೈಲ್ಗೆ ಅಂತ ಒಂಚೂರೂ ಇಲ್ಲ ನಿಂಗೆ . ಅದಕ್ಕೇ ಎಲ್ರ ಹತ್ರನೂ ಬೈಸ್ಕೋತೀ . ನಿಮ್ಮಪ್ಪಅಮ್ಮ ಅದ್ಹ್ಯಾಗ್ ನಿನ್ನ ಸೈಸ್ಕತಾರೋ .....ಹಾಳಾದವ್ನೇ ' ಅಮ್ಮ ಅದೆಷ್ಟೋಬಾರಿ ಇವನ ಪುಂಡಾಟಗಳಿಗೆ ಬೈದಿದ್ದಾಳೆ ಪ್ರೀತಿಯಿಂದ .' ಹಾಳಾದವನೇ' ಅನ್ನೋದಂತೂ ಎಲ್ಲರಮನೆಯಲ್ಲೂ ಮಕ್ಕಳಿಗೆ ಬೈಯ್ಯುವ ಪ್ರೀತಿಯ ಬೈಗುಳವೇ.. ಆದರೆ ಈಬಾರಿ ಮಾತ್ರ ಅಮ್ಮಂಗೆ ನಿಜಕ್ಕೂ ಕೋಪ ಕಟ್ಟಿತ್ತು . ಮತ್ತಿನ್ನೇನು , ದೇವರ ನೈವೇದ್ಯಕ್ಕೆಂದು ಮಾಡುತ್ತಿದ್ದ ಚಕ್ಕುಲಿಯೊಂದನ್ನು ಅನಾಮತ್ತು ಎತ್ತಿ ಬಾಯಿಗಿಟ್ಟರೆ .....
ಮಕ್ಕಳೇ ವಿಧೇಯರಾಗಿ ಕೈಕಟ್ಟಿದೂರ ನಿಂತಿರುವಾಗ , ಇವನು ಹೀಗೆ....ಅಮ್ಮನ ಹೊಟ್ಟೆಯೊಳಗಿಂದ ಚೂರು ಖಾರವಾಗಿ ಮಾತು ಹೊರಬಿದ್ದಿತ್ತು .                
'ದೇವ್ರು ದಿಂಡ್ರು ಎಲ್ಲ ಈ ಹೃದಯದಲ್ಲಿದೆ ರತ್ನಮ್ನೋರೇ , ಏನೋ ನೈವೇದ್ಯಕ್ಕಿಟ್ಟಿದ್ದನ್ನ ಆ ದೇವ್ರಿಗ್ ಕೊಡೋಮುಂಚೆ ಒಂಚೂರು ತಿಂದೆ. ಆತ್ಮನೂ ಪರಮಾತ್ಮನೇ ಅಂತೆ. ಎಲ್ಲರ ಹೃದಯದಲ್ಲೂ ದೇವರಿರ್ತಾನಂತೆ . ಅಂದ್ಮೇಲೆ ಇವತ್ತು ಈ ದೇವ್ರಿಗೆ ನೈವೇದ್ಯ ಮಾಡ್ದೆ ಅಂದ್ಕೊಳ್ಳಿ . ಆಮೇಲೆ, ಈ ದೇವ್ರಿಗೆ ನೈವೇದ್ಯಕ್ಕಿಡೋದು ತುಂಬಾ ಸುಲಭ . ಇವ್ನು ಮಡಿಮೈಲ್ಗೆ ಎಲ್ಲ ಕೇಳೋದೇಇಲ್ಲ.' ತಣ್ಣಗೆ ನಗುತ್ತಾ ಹೀಗೆಲ್ಲಾ ಉಡಾಫೆಯ 'ಮುತ್ತುಗಳನ್ನುದುರಿಸಿದ' ಈ ರಾಮಾಚಾರಿ ಅಪರಾವತಾರಿಯನ್ನೊಮ್ಮೆ ಅಮ್ಮ ಕೊಂಚ ದುರುಗುಟ್ಟಿ ಅಸಹಾಯಕಳಾಗಿ ನೋಡಿದಳು . ತಪ್ಪಿನ ಅರಿವು ಅವನಿಗಾಗಿರದೇ ಇರಲಿಲ್ಲ , ಹಾಳಾದವನು ಹಾಳು  ಚಪಲಕ್ಕೆ ಸಿಕ್ಕಿದ್ದ. ನಮ್ಮನೆಯಮೇಲೆ ಅವನಿಗೂ ತೀರಾ ಹುಚ್ಚಿನಪ್ರೀತಿ. ಅಮ್ಮನ ಸಂಕಟ ಅರ್ಥಮಾಡಿಕೊಳ್ಳದ ದಡ್ಡನೇನಲ್ಲ . ಕೆಲಸ ಮಿಂಚಿಹೋಗಿದೆ. ತತ್‍ಕ್ಷಣ ಎರಡೂ ಕೈಗಳನ್ನು ಕಿವಿಗೆ ಹಚ್ಚಿ ಉಠ್‍ಬೈಸ್ ಹೊಡೆದೇಬಿಟ್ಟ. ಕೋಪಗೊಂಡಿದ್ದ ಅಮ್ಮನ ಎದೆಯಾಳದ ಪ್ರೀತಿಯನ್ನ ಕಲಕಿಯೇಬಿಟ್ಟ. ಇನ್ನೂ ಬೈಯ್ಯಬೇಕೆಂದಿದ್ದ ಪದಗಳನ್ನೆಲ್ಲ  ಅಮ್ಮ ಮರೆತೇಹೋದಳು , ಮತ್ತೆ, ಹಾಳಾದವನೇ ಎಂದು ತುದಿನಾಲಿಗೆಯಲ್ಲಿ ಬೈಯ್ಯುತ್ತಾ ಎರಡು ಚಕ್ಕುಲಿ ಕೈಗೆ ಇಟ್ಟಾಗ , ಈ ಭಂಡಕೃಷ್ಣ ಮತ್ತೆ ಆ ಮರುಳುಗೊಳಿಸುವ ನಗುಸುರಿದು ಚಕ್ಕುಲಿಯ ಕುರುಕುರಿಸುತ್ತ ತಣ್ಣಗೆ ನಡೆದೇಬಿಟ್ಟಿದ್ದ. ಯಾಕೋ ಗೊತ್ತಿಲ್ಲ, ಮೊಟ್ಟಮೊದಲ ಬಾರಿಗೆ ಬಿಸಿಬಿಸಿ ಕಂಪನವೊಂದು ನನ್ನೊಳಗೆ ಮೇಲಿಂದ ಕೆಳತನಕ ಹರಿದಿದ್ದಂತೂ ಸುಳ್ಳೆನ್ನಲಾರೆ .                                                            
  * * * *
ನಾನು ಹೀಗೆಲ್ಲಾ ಹೇಳಿದಮೇಲೆ ನೀವು ನಿಜಕ್ಕೂ ಇವನನ್ನು ದುರ್ಗುಣಗಳದಾಸ ಎಂದುಕೊಂಡಿರುತ್ತೀರಾ ಅಥವಾ ತೀರಾ ಕೇಡಿಗ ಅಂತಲಾದರೂ ಭಾವಿಸುತ್ತೀರ .ಆದರೆ, ಹೊರಗೆ ಮುಳ್ಳಿದ್ದರೂ ಹಲಸಿನಹಣ್ಣು ಒಳಗೆಷ್ಟು ಸಿಹಿಯಲ್ಲವೇ....ಇವನೂ ಕೂಡ ಹಾಗೆಯೆ. ಹೊರ- ಜಗತ್ತಿಗೆ ಹೇಗೆಲ್ಲಾ ತೋರಿಕೊಂಡರೂ ಅಸಲಿಗೆ ಇವನು ಹಾಗಲ್ಲ . ಗುಣವಂತರೆನ್ನಿಸಿಕೊಂಡವರಿಗೂ ಇರದ ಒಳ್ಳೆ ಹೃದಯ , ಆದರ್ಶದ ಹುಚ್ಚು , ಸಹಾಯಮಾಡುವ ಮನಸು, ಅನ್ಯಾಯಕ್ಕೆ ಸಿಡಿದೇಳುವ ಖಡಕ್‍ತನ ಖಂಡಿತಾ ಇವನದಾಗಿತ್ತು . ಅದಕ್ಕೇ ನಾನವನ ರಾಮಾಚಾರಿ ಎಂದೇ ನೆನೆಸಿಕೊಳ್ಳುವುದು . ಊರಲ್ಲಿ ಯಾರದೇ ಮನೆಯ ಮದುವೆ , ಮುಂಜಿ ಕೊನೆಗೆ ಸಾವು ಯಾವುದಾದರೂ ಸೈ ಅಲ್ಲಿ ಎಂಥ ಕೆಲಸಕ್ಕೂ 'ನಾ ರೆಡಿ' ಎನ್ನುವ ಜಾತಿ . ಬಂಡಿಸಾಮಾನು ಬೇಕಾದರೂ ಹೊತ್ತುಸಾಗಿಸುವ ಆನೆಬಲ . ಕೆಲಸದಲ್ಲಿ ಮೇಲುಕೀಳು ಎನ್ನುವ ಪಂಚಾಯ್ತಿ ಇವನಿಗಿರಲಿಲ್ಲ .' ಬಾ' ಎನ್ನುವವರಿಗೆ 'ಇದೋ ಬಂದೆ ' ಎಂದೇ ಹೇಳುತ್ತಿದ್ದ . ನಾನು ಹೀಗೆಂದಾಕ್ಷಣ ಇವನು ಹಣದ ಸಹಾಯವನ್ನೂ ಮಾಡುತ್ತಿದ್ದ ಎಂದು ತಿಳಿಯಬೇಡಿ , ಖಂಡಿತಾ ಈ ಸಹಾಯ ಯಾರಿಗೂ ಇವನು ಮಾಡಿದ್ದಿಲ್ಲ . ಯಾಕೆಂದರೆ... ಸಿನಿಮಾಗಳಲ್ಲಿ ಇಂಥ ಕ್ಯಾರೆಕ್ಟರ್ ಗಳು ಯಾವಾಗಲೂ ಬಡವರಾಗೇ ಇರುತ್ತವೆ . ಹೀಗಿದ್ದರೇ ಜನಕ್ಕೆ ಒಂದುರೀತಿ ಇಷ್ಟವಾಗುವುದು . ಹಾಗೆಂದೋ ಏನೋ , ಸೃಷ್ಟಿಕರ್ತನೆಂಬ ಚಿತ್ರಬ್ರಹ್ಮ ಕೂಡ ಇವನನ್ನು ಬಡವನಾಗೇ ಈ ಭೂಮಿಗೆ ಕಳಿಸಿಬಿಟ್ಟಿದ್ದ . ಅಂದಮೇಲೆ ಈ ಸಹಾಯಕ್ಕೆ  ಮಾತ್ರ ಇವನೇ ಬೇರೆಯವರ ಮುಖ ನೋಡಬೇಕಿತ್ತು . ಇರಲಿ , ಇವನ ಪರೋಪಕಾರದ ಪ್ರವರ ನೋಡಿ ಹೇಗಿತ್ತು .
ನನ್ನೂರಲ್ಲಿ ಆಗ ನೀರಿಗೆ ತೀವ್ರಬರ ಬಂದಿದ್ದ ಬೇಸಿಗೆ . ಎಲ್ಲರಮನೆ ಭಾವಿಯೂ ಪಾತಾಳಕ್ಕೆ ಮುಖ ಮಾಡಿಯಾಗಿತ್ತು. ಒಂದೆರಡು ವರ್ಷಗಳಿಂದ ಇದೇ ಹಾಡಾಗಿದ್ದುದರಿಂದ ಅಂತೂಇಂತೂ ಊರಪುರಸಭೆ  ಸುತ್ತಮುತ್ತಲ ಆಧುನಿಕ ಆವಿಷ್ಕಾರಗಳ ಬಗ್ಗೆ ಚೂರು ಗಮನಹರಿಸಿತ್ತು . ಇದರ ಫಲವಾಗಿ ಆವರ್ಷ ನನ್ನೂರಿನ ಪೇಟೆಗೊಂದು , ಅಗ್ರಹಾರಕ್ಕೊಂದು ' ನಳಮಹಾರಾಜನ '[ನಲ್ಲಿ] ಆಗಮನವಾಗಿತ್ತು . ಹೊಸತಿನ ಆಕರ್ಷಣೆ , ನೀರಿನಹಸಿವಿನಿಂದ ಜನಕ್ಕೆ ಇದೊಂದು ಅತ್ಯಂತ ಪ್ರೀತಿಯ ತಾಣವಾಗಿಬಿಟ್ಟಿತು . ಆದರೆ ಇಲ್ಲಿ ನೀರುಹಂಚಲು ಕಾನೂನು ಏನಿಲ್ಲ . ನೀರುಬರುವ ಮೂರುಗಂಟೆಯಲ್ಲಿ ಸಿಕ್ಕಿದವರಿಗೆ ಸೀರುಂಡೆ , ಬಾಯಿದ್ದವರ ಮನೆಯ ಹಂಡೆ ಭರ್ತಿ . ಈಗ ಶುರುವಾಯಿತು ಜಟಾಪಟಿ . ಕಷ್ಟಸುಖ ಹಂಚಿಕೊಂಡು ನೆಮ್ಮದಿಯಾಗಿದ್ದ ಹೆಂಗಳೆಯರಲ್ಲಿ 'ತೂ ತೂ-ಮೈ ಮೈ ' ಗಳ ಆವಾಹನೆಯಾಯಿತು . ನನ್ನ ಮನೆಯ ಎದುರಿಗೇ ಇದ್ದ ಈ ನಲ್ಲಿಕಟ್ಟೆ ಈಗ ಹೊಡೆದಾಟ ಬಡಿದಾಟಗಳ ಗರಡಿಮನೆಯಾಗಿ ಮೆತ್ತಗಿದ್ದವರನ್ನು ಅಳಿಸುವ ತಾಣವೂ ಆಗಿಬಿಟ್ಟಿತು . ಎಲ್ಲರಿಗೂ ನೀರುಬೇಕು . ಆದರೆ , ಆ ಬಡಿವಾರಗಿತ್ತಿ-ಆ ಘಟವಾಣಿ ,ಅದೇ ಊರಿಗೊಬ್ಬಳೇ ಪದ್ಮಾವತಿ ಎಂದು ಮೆರೆಯುತ್ತಿದ್ದ, ಯಾರೊಡನೆಯೂ ಮಾತೇಆಡದೆ ಬಿಂಕ ತೋರಿಸುತ್ತಿದ್ದ ಜಲಜಾಕ್ಷಿಯ ಇದಿರು ನಿಲ್ಲುವವರಾರು . ಮನೆಯಲ್ಲಿ ಪಾರುಪತ್ಯ ಮಾಡುತ್ತಿದ್ದ ಅಭ್ಯಾಸ ಬೀದಿಯಲ್ಲಿ ಬಿಟ್ಟೀತೇ.....ಅವರು ತರುವ ಕೊಡಗಳು ಅಕ್ಷಯಕೊಡಗಳಾಗಿ ಒಂದರಹಿಂದೊಂದರಂತೆ ಮನೆಯಿಂದ ಬರುತ್ತಲೇಇದ್ದವು, ಅವರಮನೆಯ ನೀರಿನಹಸಿವು ತಣಿಯುವವರೆಗೆ ಮೊದಲೇ ಕಾದುನಿಂತವರೂ ಬಾಯಿಮುಚ್ಚಿ ತೆಪ್ಪಗಿರುವ ಅನಿವಾರ್ಯತೆ . ಇನ್ನು ಇಲ್ಲಿಗೆ ಗಂಡಸರಾರೂ- ಗಂಡುಮಕ್ಕಳ ಹೊರತು - ಬಾರದ ಸಂಪ್ರದಾಯ , 'ಗಂಡಸಿಗ್ಯಾಕೆ ಗೌರಿದುಃಖ' ಎನ್ನುವ ಕಾಲದ ಸಣ್ಣೂರು . ಸರಿ , ಜಲಜಾಕ್ಷಿ ಊರಿಗೊಬ್ಳೇ ಪದ್ಮಾವತಿ ಆಗಿಯೇಬಿಟ್ಟರು .                                              
ಪಕ್ಕದ ಊರಿನಲ್ಲಿ ಪದವಿಕಾಲೇಜಲ್ಲಿ ಓದುತ್ತಿದ್ದ ಈ 'ರಾಮಾಚಾರಿ' ಬೇಸಿಗೆರಜಕ್ಕೆ ಬಂದ . ನಲ್ಲಿಕಟ್ಟೆಯ ರಸವತ್ತಾದ ಮಾರಾಮಾರಿಯನ್ನೂ ಕಂಡ. ಎರಡೇದಿನ, ಊರಲ್ಲೆಲ್ಲಾ ಸುತ್ತಾಡಿ ಎಲ್ಲರಕಿವಿಯಲ್ಲೂ ಅದೇನೇನೋ ಉಸುರಿ ಬಂದ . ಮರುದಿವಸ ಅಲ್ಲೊಂದು ಮಹತ್ತಾದ ಘಟನೆ ನಡೆದೇಬಿಟ್ಟಿತು . ಮೊದಲೇ ಕೊಡ ಇಟ್ಟು ಹಕ್ಕುಸ್ಥಾಪಿಸಿ ನೀರುಬರುವ ಸಮಯಕ್ಕೆ ಅಲಂಕರಿಸಿಕೊಂಡುಬರುವ ಜಲಜಾಕ್ಷಿಯ ದುರಹಂಕಾರದ ಪ್ರತೀಕವಾದ ಕೊಡಗಳು ಉದ್ದನಿಂತಿರುವ ಕೊಡಗಳ ಸಾಲಿನ ಹಿಂತುದಿಯನ್ನು ಸೇರಿದವು . ನಲ್ಲಿಯಿಂದ ನೀರು ಫಳಕ್ ಎಂದು ಕೆಳಬೀಳುವ ಸಮಯ , ನಾರಿ ವೈಯ್ಯಾರದಿಂದ ಬಂದೇಬಿಟ್ಟರು . ಆದರೆ ಅವರ ಕೊಡವಿಲ್ಲ , ಬೇರೆಯಾರದೋ ಕೊಡಕ್ಕೆ ವರುಣನ ಪ್ರಸಾದ. ಕೆಂಗಣ್ಣಿನಲ್ಲಿ ಸುತ್ತನೋಡಿ  ಬಾಯಿಬಿಚ್ಚಬೇಕೆನ್ನುವಷ್ಟರಲ್ಲಿ..... . ಈಗ ಬಿಚ್ಚಿದ ದನಿ ಕೃಷ್ಣನದ್ದಾಗಿತ್ತು . 'ಇಲ್ಲಿ ಯಾರೂ ಕೊಡ ಇಟ್ಟುಹೋಗಿ ಜಾಗ ಕಾದಿರಿಸುವಂತಿಲ್ಲ. ಆ ಸಮಯದಲ್ಲಿ ಬಂದು ಕ್ಯೂ ನಿಲ್ಲಬೇಕು . ನಿಂತವರು ತಲಾ ಎರಡೆರಡು ಕೊಡ ಹಿಡಿದು ಬೇರೆಯವರಿಗೆ ಅವಕಾಶ ಕೊಡಬೇಕು . ಎಲ್ಲರ ಸರದಿ ಒಮ್ಮೆ ಮುಗಿದಮೇಲೆ ಇನ್ನೊಮ್ಮೆ , ಮತ್ತೊಮ್ಮೆ , ಮಗದೊಮ್ಮೆ ಇದೇ ಶಿಸ್ತಿನಲ್ಲಿ ನೀರುಹಿಡಿಯಬೇಕು . ಇದು ಯಾರ ಸ್ವಂತದ್ದೂ ಅಲ್ಲ . ಎಲ್ಲರಿಗೂ ಸಮಾನಪಾಲು '. ಮೀಸೆ ತಿರುವಿದ ಈ ನ್ಯಾಯದ ದನಿಗೆ ಎಲ್ಲರೂ ಹಿಗ್ಗಿದರು , ಆದರೆ ನಮ್ಮ ಜಲಜಾಕ್ಷಿಗೆ ಕೆಂಡಾಮಂಡಲ ಕೋಪ ನಖಶಿಖಾಂತ ಹೊತ್ತಿತು . ಹಿಂದಿದ್ದ ಕೊಡಗಳ ತಂದು 'ನೀನ್ ಯಾವ್ ಊರಿನ್ ದೊಣ್ಣೆನಾಯ್ಕನೋ ಹೀಗೆಲ್ಲಾ ಹೇಳೋಕೆ . ಹೋಗ್ ಹೋಗ್ ' ಎಂದು ಬೇರೆಕೊಡ ಕಾಲಿಂದ ತಳ್ಳಿ ತನ್ನದಿಟ್ಟಾಗ ಇವ ನಿಜಕ್ಕೂ ಹೆಡೆತುಳಿದ ನಾಗರಹಾವೇ ಆಗಿಬಿಟ್ಟ . ಮದಿಸಿದ ಹೆಣ್ಣು , ಆಂಗ್ರಿಯೆಂಗ್ ಮ್ಯಾನ್ ನಡುವಣ ರಸವತ್ತಾದ ಹಣಾಹಣಿ ಅಲ್ಲಿದ್ದವರಿಗೆಲ್ಲಾ ಬಿಟ್ಟಿ ಮನರಂಜನೆ ಒದಗಿಸಿತು. ಎಷ್ಟಾದರೂ ಇವ ಅಂಜದಗಂಡು . ಸಭ್ಯತೆಯ ವಾದಕ್ಕೆ ಬಗ್ಗದ ಆ ಕೆರಳಿದ  ಸರ್ಪಿಣಿಗೆ ಯಾರೂ ನಿರೀಕ್ಷಿಸದಿದ್ದ ಟ್ರೀಟ್‍ಮೆಂಟ್ ಕೊಟ್ಟೇಬಿಟ್ಟ.
        ಅನಾಮತ್ತಾಗಿ ಅವರನ್ನು ಹೀರೋನಂತೆ ಎತ್ತಿಕೊಂಡವನೇ ಅವರ ಮನೆಯೆಡೆ ನಡೆದೇಬಿಟ್ಟ . ಮನೆಯಲ್ಲಿ ಧಪ್ ಎಂದು ಕೆಳಹಾಕಿದವನೇ, 'ಊರಿಗೊಂದು ರೀತಿಯಾದರೆ ನಿಮಗೇ ಬೇರೊಂದು  ಎನ್ನುವಂತಿದ್ದರೆ ನೀವಲ್ಲಿ ಬರುವಂತಿಲ್ಲ. ಇದೇಕಡೆ, ನಾನಿನ್ನೂ ಎರಡುತಿಂಗಳು ಇಲ್ಲೇ ಇರ್ತೀನಿ. ಸುಧಾರಣೆಯಾದರೆ ಗುಡ್ , ಇಲ್ಲದಿದ್ದರೆ ಮತ್ತಿದೇ ಟ್ರೀಟ್‍ಮೆಂಟ್ . ಯೋಚ್ನೆ ಮಾಡಿ.' ಕೈಕೊಡವಿ ಹೊರನಡೆದವನ ದಂಗುಬಡಿದು ನೋಡಿದರು ಜಲಜಾಕ್ಷಿ . ಮಕ್ಕಳ ಎದಿರೇ, ಊರಿನ ಹೆಂಗಳೆಯರ ಎದಿರೇ ಈರೀತಿ ಮಾನಹರಾಜಾದಂಥ ಘಟನೆ . ಒಳಗಿದ್ದ ದರ್ಪ , ಅಹಂಕಾರ ಝಲ್ಲನೆ ಬೆವೆತು ನಡುಗಿತು .ಇಷ್ಟೇ,  ಮುಂದೆ ಮಕ್ಕಳು ಮಾತ್ರ ತಲೆತಗ್ಗಿಸಿಕೊಂಡು  ಬಂದು ಎರಡೇಕೊಡದ ಕಾನೂನಿಗೆ ಬಧ್ಧರಾಗಿರುವುದೇ ಇತಿಹಾಸವಾಯಿತು . ಮೊದಲೇ ಯಾರೊಂದಿಗೂ ಬೆರೆಯದಿದ್ದ ಜಲಜಾಕ್ಷಿ ಈಗ ಎಲ್ಲರಿಂದ ಮತ್ತಷ್ಟು ದೂರವೇ. 'ಆ ದುಷ್ಟ ಹಾಗೆ ನಡೆದುಕೊಂಡಾಗ ಒಬ್ಬರೂ ನನ್ನಸಹಾಯಕ್ಕೆ ಬರಲಿಲ್ಲ ' ಎಂದು ಇದ್ದ ಒಬ್ಬರೇ ಹತ್ತಿರದವರಲ್ಲಿ ಎಲ್ಲರನ್ನೂ ಹಿಗ್ಗಾಮುಗ್ಗಾ ಬೈದರಂತೆ . ಒಂದಂತೂ ನಿಜ , ಈ ಕೃಷ್ಣ ಎಂಬ ರಾಮಾಚಾರಿ ಕ್ಯಾರೆಕ್ಟರ್‍ನ ಅಲ್ಲಿಯತನಕ ಬೈಯ್ಯುತ್ತಿದ್ದವರೆಲ್ಲಾ ಆದಿನ ಮಾತ್ರ ಹಾಡಿಹೊಗಳಿದವರೇ . ಅಮ್ಮ ಮತ್ತೆ ಬೈದಳು ಪ್ರೀತಿಯಿಂದ , 'ಥೂ, ದುಷ್ಟಮುಂಡೇದೇ, ಗಂಡ್ಸಾಗಿ ಒಬ್ಬ ಹೆಂಗಸನ್ನ ಹಾಗೆಲ್ಲಾ ಮುಟ್ಟಿದ್ದೂ ಅಲ್ದೆ ಎತ್ತಿ ಹೊತ್ಕೊಂಡ್ ಹೋಗೋದಾ ..ಕೇಡಿಗ ಕಣೋ ನೀನು .' 'ಅಯ್ಯೋ ರತ್ನಮ್ನೋರೇ , ನಾನು ಗಂಡ್ಸಾಗಿದ್ದಿದ್ದಕ್ಕೇ ಅವ್ರನ್ನ ಹೊತ್ಕೊಂಡ್ ಹೋಗಿದ್ದು . ನಿಮ್ಮ ಹಾಗೆ ಹೆಂಗ್ಸ್ ಆಗಿದ್ದಿದ್ರೆ ದಿನಾ ಅತ್ಕೋತ , ನಲ್ಲಿನೀರೂ ಸಿಗ್ದೆ ಕಷ್ಟ ಪಡ್ಬೇಕಾಗ್ತಿತ್ತು . ಈಗ್ ನೋಡಿ , ನಲ್ಲಿಕಟ್ಟೇಲಿ ಜಗಳ ಇದ್ಯಾ , ನೀರು ಸಿಗ್ಲಿಲ್ಲಾ ಅನ್ನೋ ಪಂಚಾಯ್ತಿ ಇದ್ಯಾ... ನಿಮ್ಗೆಲ್ಲಾ ಒಳ್ಳೆದಾಯ್ತೋ ಇಲ್ವೋ ' 'ಅದೆಲ್ಲಾ ಸರಿ , ..'ಅಮ್ಮ ರಾಗ ಎಳೆದಳು .' ಎಲ್ಲಾನೂ ಈಗ ಸರೀಆಯ್ತು ' ತಣ್ಣಗೆ ನಗುತ್ತಾ ನಡೆದೇಬಿಟ್ಟ ಈ ರಾಮಾಚಾರಿ .    
ಇಂಥಾ ಘಟನೆಗಳು ನನ್ನೂರಲ್ಲಿ ಒಂದಿಷ್ಟು ನಡೆದಿದೆ . ಆಗೆಲ್ಲಾ ಇವನು ಮಾಡಿದ್ದು ಸೈ ಎನ್ನುವವರು ಒಂದಿಷ್ಟು ಮಂದಿಯಾದರೆ , ಅದರ ಇನ್ನೊಂದು ಮುಖದಲ್ಲಿ ಕಂಡ ಕೆಡುಕನ್ನೇ ಎತ್ತಿಹಿಡಿದು ಮತ್ತೆ ಅವನನ್ನು ಅಪಾಪೋಲಿ ಎಂದೇ ಜರೆಯುವಮಂದಿ ಇನ್ನಷ್ಟು . 'ಆ ದುಂಡುಮೈಯ್ಯ ಜಲಜಾಕ್ಷಿಯನ್ನ ಹೊತ್ಕೊಂಡ್ ಹೋಗೋ ಅಂಥ ಚಪಲ ಈ ಪುಂಡುಪೋಕ್ರಿಯಲ್ಲಿ ಯಾವಾಗಿಂದ ಇತ್ತೋಏನೋ ..ಈಗ ಹೀಗೆ ....' ಎಂದವರು, ಇವನೆಂಥಾ ಸಿಕ್ಕನ್ನ ಬಿಡಿಸಿದ್ದ ಅನ್ನೋದನ್ನೇ ನೆನೆಸಿಕೊಳ್ಳಲು ಸಿಧ್ಧರಿರಲಿಲ್ಲ . ಹೋಗಲಿಬಿಡಿ , ಇದಕ್ಕೆ ಇವನೇನೂ ತಲೆಕೆಡಿಸಿಕೊಳ್ಳದ ಡೋಂಟ್ ಕೇರ್ ಆಸಾಮಿ ಎಂದು ಈ ಹಿಂದೇ ಹೇಳಿದ್ದೀನಿ . ಒಟ್ಟಿನಲ್ಲಿ ಇವನಿಗೆ ಸರಿ ಎನಿಸಿದ್ದನ್ನ ಅವನದೇ ರೀತಿಯಲ್ಲಿ ಮಾಡುವುದೇ ಇವನ ಸ್ಪೆಷಾಲಿಟಿಯಾಗಿತ್ತು. ಒಳ್ಳೆಯದನ್ನು ಮಾಡುವಾಗಲೂ ಇವನು ಅನುಸರಿಸುವ ಮಾರ್ಗ ಚೂರು ಅಡ್ಡದಾರಿಯದೇ ಅನಿಸುವಮಟ್ಟಿಗೆ ಇರುತ್ತಿದ್ದುದನ್ನು ಗಮನಿಸುವ ವ್ಯವಧಾನವೇ ಇವನಲ್ಲಿರಲಿಲ್ಲ , ಎಷ್ಟಾದರೂ 'ಆಂಗ್ರಿ ಯೆಂಗ್ ಮ್ಯಾನ್' ಅಲ್ಲವೇ.....
* * * *
ಅಪಾಪೋಲಿ , ದುಷ್ಟ , ಪುಂಡ ,ಒರಟ ಹೇಗೇ ಕರೆಸಿಕೊಂಡರೂ ಒಂದು ವಿಷಯದಲ್ಲಿ ಮಾತ್ರ ಇವನಿಗೆ ಇವನೇ ಸಾಟಿಯಾಗಿದ್ದ. ಪಿಯುಸಿ ಯವರೆಗೆ ಮಾತ್ರ ಕಲಿವಸೌಲಭ್ಯವಿದ್ದ ನನ್ನೂರ ಶಾಲಾ , ಕಾಲೇಜಿನಲ್ಲಿ ಎಲ್ಲವೂ ಶಿಸ್ತುಮಯ . ಕಾಲವೂ ಹಾಗೆ , ಜನರೂ ಹಾಗೆ . ಆದರೆ , ಈ ಕೃಷ್ಣ ಮಾತ್ರ ಇಲ್ಲೂ ಅಪವಾದವೇ . ಮೊದಲೇ ಸರಿ , ಇನ್ನು ಶಾಲೆಕಾಲೇಜು ಅಂದರೆ ಗಂಭೀರವಾಗಿರುವ ಜಾಯಮಾನವೂ ಇವನದಲ್ಲ , ವಯಸೂ ಅಲ್ಲ . ಈ ಲೈಫ್ ಗೋಲ್ಡನ್ ಲೈಫ್ ಹೌದುತಾನೇ....ಹಾಗಾಗಿ ಹುಡುಗಿಯರ ಕೆಣಕುವ , ಕಣ್ಣುಹೊಡೆವ ನಿರಪಾಯಕಾರಿ ಚೇಷ್ಟೆಗಳ ಖಂಡಿತಾ ಮಾಡುತ್ತಿದ್ದ . ಬೈಯ್ಯುವವರು , ಉಗಿಯುವವರು , ಹೆಡ್ ಮಾಸ್ತರರಲ್ಲಿ ಅಹವಾಲು ಹೇಳುವವರಿದ್ದು , ಅದರ ಫಲವಾಗಿ ಪನಿಷ್‍ಮೆಂಟ್‍ಗಳ ಧಾರಾಳ ' ಉಡುಗೊರೆಗಳು ' ಸಿಕ್ಕಿಯೂ 'ಹಾಳಾದವನು ' ಒಮ್ಮೆಯಾದರೂ ಫೇಲ್ ಆಗಿದ್ದುಂಟಾ...ಊಹೂಂ , ಅದು ಹೋಗಲಿ , ಯಾವಾಗಲೂ ನೂರಕ್ಕೆ ಎಂಬತ್ತರಾಚೆಯ ಮಾರ್ಕುಗಳೇ ಇವನ ಜೇಬಿಗೆ . ಅಮ್ಮ ಒಮ್ಮೆ ಕೇಳಿದ್ದಳು , 'ಅಲ್ವೋ , ಮೂರ್ ಹೊತ್ತೂ ಅಲ್ಕೊಂಡೇ ಇರ್ತೀಯ . ಬರೀ ತರ್ಲೆ -ತಕರಾರು ಮಾಡ್ಕೊಂಡೇ ಕಾಲಕಳೀತೀಯ . ಅದ್ಯಾವಾಗ ಓದ್ತಿ  ಏನ್ ಕಥೆ .ಅಥ್ವಾ ಆ ಮೇಸ್ಟ್ರಿಗೆಲ್ಲ ರೋಪ್ ಹಾಕಿ ಹೀಗೆ ಮಾಕ್ರ್ಸ ತೊಗೋತೀಯೋ ಹ್ಯಾಗೆ ' ....
'ಅಯ್ಯಯ್ಯೋ ರತ್ನಮ್ನೋರೇ ಅಡ್ಡಬೀಳ್ತೀನಿ , ಹೀಗೆಲ್ಲಾ ಈ ವಿಷ್ಯದಲ್ಲಿ ಮಾತ್ರ ಮರ್ಯಾದೆ ಕಳೀಬೇಡ್ರಿ . ಅಂಥಾ ಕೆಟ್ಟಕೆಲ್ಸ ಮಾತ್ರ ಇದುವರ್ಗೂ ಮಾಡಿಲ್ಲ , ಮಾಡೋದೂ ಇಲ್ಲ . ನನ್ನ ನಂಬಿ ' ಯದ್ವಾತದ್ವಾ ಆಕ್ಟಿಂಗ್ ಮಾಡಿ ಎಲ್ಲರ ಹೊಟ್ಟೆಹುಣ್ಣಾಗಿಸುವಂತೆ ನಗಿಸಿಬಿಟ್ಟ . ಆದರಿದು ಸುಳ್ಳಲ್ಲ , ಈ ವಿಷಯದಲ್ಲಿ ಸತ್ಯವನ್ನೇ ಹೇಳಿದ್ದಾನೆ ಎನ್ನೋದು ಎಲ್ಲರಿಗೂ ಗೊತ್ತಿದ್ದ ಸತ್ಯವೇ ! ನಿಜಕ್ಕೂ ಅವನ ಬುಧ್ಧಿಮಟ್ಟ ಅಸಾಧಾರಣದ್ದಾಗಿತ್ತು . ಮತ್ತೂ ಹೇಳಿದ್ದ , 'ನೋಡಿ , ಬ್ರಹ್ಮ ಸೃಷ್ಟಿಮಾಡೋವಾಗ ನಿಧಾನವಾಗಿ ಕೂತು ಒಳ್ಳೆಯವರನ್ನ , ಕೆಟ್ಟವರನ್ನ ತಪ್ಪಿಲ್ಲದ ಹಾಗೆ ಮಾಡ್ತಾನೆ . ಆದ್ರೆ ನನ್ನ ಮಾಡೋವಾಗ ಅವ್ನಿಗೆ ಮೂಡಿರ್ಲಿಲ್ಲ ಅಂತ ಕಾಣ್ಸುತ್ತೆ . ಅದಕ್ಕೇ ಒಳ್ಳೆದು-ಕೆಟ್ಟದು ಎಲ್ಲಾನೂ ಚೀಲದಲ್ಲಿ ತುಂಬೋಹಾಗೆ ತುಂಬಿ ಭೂಮಿಗೆ ಕಳ್ಸ್‍ಬಿಟ್ಟಿದಾನೆ . ಅದಕ್ಕೇ ನಾ ಹೀಗೆ . ಎಡವಟ್ಟೂ ಹೌದು , ಬಂಗಾರವೂ ಹೌದು .....'
ರೂಮಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದ ನನ್ನಕಿವಿಗೆ  ಈ ಎಲ್ಲ ಮಾತುಗಳೂ ಬಿದ್ದಿತ್ತು . ನನಗೆ ಲೆಖ್ಖ ಹೇಳಿಕೊಡಲು  ಬಂದವನಿಗೆ ಸಹಜವಾಗಿ ಎಂಬಂತೆ , 'ಛೇ, ಆ ದೇವ್ರು ನಿಧಾನಕ್ಕೆ ಕೂತು ನಿನ್ನ ಸೃಷ್ಟಿಸಬೇಕಿತ್ತು ಕಣೋ . ನೀನು ಕೆಟ್ಟೋನು ಅನ್ನಿಸ್ಕೋಬಾರ್ದಿತ್ತು .'ಎಂದೆ ಅಷ್ಟೆ . ಅದೇನಾಯಿತೋ ಅವನಿಗೆ ಒಂದುಥರಾ ನೋಡಿದ . ಕಣ್ಣಲ್ಲೊಂದು ಹೊಳಪುಕ್ಕಿತು . ಗಲಿಬಿಲಿಗೊಂಡ . ಎಣ್ಣೆನೀರೆರೆದು ಬೆನ್ನತುಂಬಾ ದಟ್ಟಕಪ್ಪುಕೂದಲ ಹರಡಿ ಕುಳಿತಿದ್ದ ಹದಿನಾರರ ಹರಯದ ನನ್ನನೊಮ್ಮೆ ಗಟ್ಟಿಹಿಡಿದು ಮೀಸಲು ಮುರಿಯದ ತುಟಿಗಳಿಗೆ ತುಟಿಯೊತ್ತಿಯೇಬಿಟ್ಟ . ಕ್ಷಣ ಅಷ್ಟೇ , ಸಹಜವಾದ . ಮತ್ತದೇ ಹಳೆಯ ಭಂಡತನದಲ್ಲಿ ,'ನಾನು ಒಳ್ಳೆಯವನೇ ಆಗಿದ್ದಿದ್ರೆ  ನೀನನ್ನ ಮದ್ವೆ ಮಾಡ್ಕೋತಿದ್ಯಾ ....?' ಕನಸಗಂಗಳಲ್ಲಿ ಕೇಳಿದ. ಭಯ, ನಾಚಿಕೆ ,ಇನ್ನೂ ಹೇಳಲಾಗದ ಸಿಕ್ಕುಗಳಲ್ಲಿ ,'ಥೂ , ಹಾಳಾದವ್ನೇ . 'ಎನ್ನುತ್ತಾ ಕೈಲಿದ್ದ ಪುಸ್ತಕದಲ್ಲೇ ಹೊಡೆದೆ . ಯಾಕೋ ಅವನು ಅವನಾಗಿ ಕಾಣಲೇಇಲ್ಲ . ಯಾವುದೋ ಗುಂಗಿಗೆ ಸಿಕ್ಕವನಂತೆ ಲೆಖ್ಖ ಹೇಳಿಕೊಡದೆ ಬಾಗಿಲಾಚೆ ನಡೆದೇಬಿಟ್ಟ . ಒಂದುವೇಳೆ ಹೇಳಿಕೊಡುತ್ತೇನೆಂದಿದ್ದರೂ , ಹೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿ ನಾನೂ ಇರಲಿಲ್ಲ .
ಹ್ಞಾಂ , ಇದನ್ನು ಕೇಳಿದಮೇಲೆ ನನಗೇನಾದರೂ ....ಅವನ ಬಗ್ಗೆ ಲವ್ವುಗಿವ್ವು ....ಇತ್ತಾ... ಎಂದು ಪ್ರಶ್ನಿಸಿದರೆ , ಖಂಡಿತಕ್ಕೂ ಇರಲಿಲ್ಲ . ಹರಯಕ್ಕೆ ಸಹಜವಾದ ಚೂರುಪಾರು ಕನವರಿಕೆ ಕಂಡಿದ್ದುಂಟು . ಆದರೆ , ಅವನೇಕೆ ಹೀಗೆ ಕೇಳಿದನೋ ಅದು ಇಂದಿಗೂ ಒಗಟೇ . ಆದರೆ...ಹೌದು ಆದರೆ , ಆದಿನ ಆತುಟಿಗಳ ಸಂಪರ್ಕಕ್ಕೆ ಸಿಕ್ಕ ನನ್ನ ತುಟಿಗಳು ಬೆಚ್ಚಗಾಗಿದ್ದನ್ನು ಯಾವಾಗಲಾದರೂಮ್ಮೆ ನೆನೆದರೆ , ಮತ್ತೆ ಬೆಚ್ಚಗಾಗುತ್ತಿದ್ದ ಅನುಭವವಂತೂ ನಿಜ ಎಂಬುದನ್ನು ಹೇಳಲು ಮುಜುಗರವಾದರೂ ನಿಜವಾಗಿತ್ತು .
.
                  * * *


               ಅಳೆದ ಕೆಲಸ ಮುಗಿದಿತ್ತು.  ಕೊಂಚಬಾಗಿದಬೆನ್ನು , ಬಿಳಿಚಿಕೊಂಡ ಮುಖ , ಠೀವಿಯಿಂದ
ತಿರುವುತ್ತಿದ್ದ ಹುರಿಮೀಸೆಯ ಜಾಗದಲ್ಲಿ ಹಣ್ಣುಮೀಸೆ , ತಲೆಯಲ್ಲಿ ಉಳಿದಿರುವ ಹತ್ತಿಪ್ಪತ್ತು ಬಿಳಿಯಕೂದಲು , 'ತುಂಬಾ ಬದಲಾಗಿದ್ದೀಯ ಕಣೋ '  ಎಂದೆ ಜೊಂಪೆಜೊಂಪೆ ಕಪ್ಪಗಿನ ಅಂದಿನ ಸುರುಳಿಕೂದಲ ನೆನೆಯುತ್ತ . ಅದೇಕೋ ಒಂದಿಷ್ಟು ಸಂಕಟ ಕೂಡ . 'ಹ್ಞುಂ , ವಯಸ್ಸಾಯ್ತಲ್ಲೇ ', 'ಸುಮ್ನಿರೋ , ಏನ್ ಭಾರಿ ವಯಸ್ಸು . ಐವತ್ತಾಯ್ತಾ ' ಕೇಳಿದೆ . 'ಹ್ಞುಂ ' ಎಂದು ಹುಳ್ಳಗೆ ನಕ್ಕವನೇ ' ನೀ ಮಾತ್ರಾ ನೋಡು ಹಾಗೇ ಇದ್ದೀ 'ಎಂದಾಗ ಯಾಕೋ ಅವನ ನೋಟ ನನ್ನ ತುಟಿಗಳ ಕೂಡ ಮಾತಾಡಿತೇ .....ಬೆದರಿದೆ. ಕ್ಷಣ ಅಷ್ಟೇ. ನನ್ನ ಬೆನ್ನಹಿಂದಿನಿಂದ ,
 ' ತಥ್, ಈ ಮನ್ಷ ಒಂದ್‍ಕ್ಷಣ ನಿಂತಲ್ ನಿಲ್ಲಲ್ಲ . ಎಲ್ ಹಾಳಾಗ್ ಹೋದ್ರೋ . ಸಾಕಾಗಿದೆ ಇವ್ರ ಸಾವಾಸ ... ಓ , ಇಲ್ಲಿದ್ಯಾ ಸವಾರಿ . ಇಲ್ಲೇನ್ರಿ ಮಾಡ್ತಿದೀರ ' ಎನ್ನುವ ಅತಿಗಡುಸಿನ ವ್ಯಂಗ್ಯದನಿಗೆ ಬೆಚ್ಚಿ ಹಿಂತಿರುಗಿದೆ . ಒರಟು ದನಿಯಂತೇ ಇರುವ ದಢೂತಿಹೆಂಗಸು . ಹೌದು , ಆಕೆ ಹೀಗೆ ಶಾಪ ಹಾಕುತ್ತಾ ಬಂದಿದ್ದು ಮತ್ತಾರಿಗೂ ಅಲ್ಲ , ಈ ಅಂಜದಗಂಡು ಕೃಷ್ಣನಿಗೇ . ಕಾಲಬದಲಾವಣೆಯಲ್ಲಿ ನಾನವನ ಬಹುಷಃ ಇಪ್ಪತ್ತೆರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕಂಡಿರಲಿಲ್ಲ . ಮುಂಬಯಿಯಲ್ಲಿದ್ದಾನಂತೆ , ಅಂತರ್ಜಾತೀಯ ವಿವಾಹವಾಗಿರುವನಂತೆ , ಪತ್ನಿ ಅತಿಶ್ರೀಮಂತನ ಏಕೈಕಮಗಳಂತೆ , ಹೌದು , ಹೀಗೆಲ್ಲ ಗಾಳಿಸುದ್ದಿ ಕಿವಿಗೆ ಬಿದ್ದಿತ್ತು . ಈಗ......
'ಸರೂ , ಇವ್ರು ನಮ್ಮ ಮನೆಯೋರು .ಸುನೀತಾ ' ಪೆಚ್ಚುನಗೆ ಚೆಲ್ಲಿ ಕೃಷ್ಣ ಹೀಗೆಂದಾಗ ನಾನು ಫಕ್ಕನೆ ನಕ್ಕುಬಿಟ್ಟೆ . 'ಏ , ಏನೋ ಇದು . ಅವರು ಹೇಳಬೇಕಾದ್ದನ್ನ ನೀ ಹೇಳ್ತಿದ್ದೀ ......' ಮಾತು ಮುಗಿಸಲಾಗಲಿಲ್ಲ , ಅವರೆಡೆ ದೃಷ್ಟಿಹಾಯಿಸಿದವಳಿಗೆ ಆಮುಖದಲ್ಲಿ ಅತೀವಬಿಗು , ಅಸಮಾಧಾನ , ಕೆರಳಿಕೆ ಕಂಡು ತುಟಿಕಚ್ಚಿಕೊಂಡೆ. ಯಾಕೋ ಸಹಜವಾಗಿರಲು ಸಾಧ್ಯವಿಲ್ಲ ಎನ್ನಿಸಿಬಿಟ್ಟಿತು .
ಅಲ್ಲಿದ್ದ ಹತ್ತೇಹತ್ತು ನಿಮಿಷಗಳಲ್ಲಿ ಕೃಷ್ಣನ ಪೆಚ್ಚುಪೆಚ್ಚುನಗೆ ಹತ್ತಾರುಸಲ ಬಿಚ್ಚಿಕೊಂಡಿತ್ತು . ಏನೇನೋ ತೊದಲಿದ . ಮನೆಯೆಲ್ಲಿ ಎಂಬ ಪ್ರಶ್ನೆಗೆ , ಮನೆಗೆಬಾ ಎಂಬ ಆಹ್ವಾನಕ್ಕೆ ಗಲಿಬಿಲಿಯ ಎಂತೆಂತದೋ ಉತ್ತರ ಕೊಟ್ಟ . ಅದೆಷ್ಟೋ ವರ್ಷಗಳ ನಂತರ ಸಿಕ್ಕವನನ್ನು ಕೇಳಬೇಕೆಂದಿದ್ದ ಪ್ರಶ್ನೆ , ವಿವರಗಳ ಬಯಕೆಯೆಲ್ಲ ಉಕ್ಕಿಬಂದ ಉತ್ಸಾಹದಷ್ಟೇ ವೇಗವಾಗಿ ತಣ್ಣಗಾಯಿತು . 'ನಡೀರಿ , ಇನ್ನೂ ಕೆಲಸ ಇದೆ ' ,ಸೌಜನ್ಯಕ್ಕಾದರೂ ಒಂದಷ್ಟು ಮಾತನಾಡದೆ, ಹೀಗೆಹೇಳುತ್ತ ಹೆಚ್ಚುಕಮ್ಮಿ ಅವನ ಕೈಹಿಡಿದು ಎಳೆದುಕೊಂಡು ಹೊರಟಂತೆ ಹೊರಟಾಗ , 'ಬರ್ತೀನಿ ಕಣೆ ಸರೂ 'ಎನ್ನುತ್ತಾ ಬೆನ್ನುಬಾಗಿಸಿ ನಡೆದವನನ್ನು ನಾನು ಮೂಕಳಂತೆ ನೋಡಿದೆ .  'ಛೇ , ಎದೆಸೆಟೆಸಿ ನಡೆಯುತ್ತಿದ್ದ , ಹತ್ತಾನೆಯ ತೋಳ್ಬಲದ ಕೈಗಳ ಬೀಸಿನಡೆಯುತ್ತಿದ್ದ , ಮುಖದತುಂಬಾ ಸುಂದರನಗೆ ಚೆಲ್ಲಿ ಹುಡುಗಿಯರ ಲಬ್‍ಡಬ್ ಏರಿಸುತ್ತಿದ್ದ, ಅನ್ಯಾಯಕ್ಕೆ  ಕುದಿಯುತ್ತಿದ್ದ , ಆದರ್ಶಕ್ಕೆ ಸೋಲುತ್ತಿದ್ದ , ಹೆದರಿಕೆಯನ್ನೇ ಕಾಣದ ಆ 'ರಾಮಾಚಾರಿ ' ಕೃಷ್ಣನೇ ಇವನು .....
'ಏಯ್ ಕೃಷ್ಣ, ನೀನಲ್ಲ ಕಣೋ ಇದು' ಮನದಲ್ಲೇ ಹೇಳಿಕೊಂಡೆ . ಕೇಳಿಸಿತೆಂಬಂತೆ ತಿರುವಿನಲ್ಲೊಮ್ಮೆ ಹಿಂತಿರುಗಿದ. ಇಲ್ಲ, ಆ ನೋಟಕ್ಕೆ ಸಿಕ್ಕರೂ ನನ್ನ ಅಧರಗಳು ಬೆಚ್ಚಗಾಗಲೇ ಇಲ್ಲ. ಬಹುಷಃ ಕೃಷ್ಣನ ಮದುವೆಯಾದ ದಿನವೇ 'ರಾಮಾಚಾರಿ ' ಕಳೆದುಹೋಗಿರಬೇಕು. ಅವನಿಗಾಗಿ ನನ್ನಿಂದ ಒಂದು ನಿಟ್ಟುಸಿರ ಕಾಣಿಕೆ ಹೊರಬಿದ್ದಿತು .

* * * *
                                                         

ಭಾನುವಾರ, ಜುಲೈ 12, 2015

Kolalanomme Udu

                 









ಕವಿತೆ     ಕೊಳಲನೊಮ್ಮೆ ಊದು...                     21.6.15    

ನವಿಲುಗರಿ ನಡುವಲ್ಲಿ ಇದೆಂಥ ಆಟವೋ ಕೃಷ್ಣ
ತತ್ತರಿಸಿ, ಒತ್ತರಿಸಿ, ಉಮ್ಮಳಿಸಿ ನಡುಗಿಹುದು ಎದೆ ನೋಡು
ಇದು ನಿನ್ನ ಕಾಲವಲ್ಲ ಮುತ್ತಿ ಮುತ್ತಿಕ್ಕಿ ಬೆಣ್ಣೆಯೂಡಿಸಲು...
ಇದು ನಿನ್ನ ಕಾಲವಲ್ಲ ಮುತ್ತಿಕ್ಕಿದರೂ ಮುಕ್ತಿಪಥದಲಿ ಮೇಲೇರಲು, ನೆಮ್ಮದಿಯಲಿ
ತೋಳಲೊರಗಿ ಸುಖಿಸಲು....

ಇಲ್ಲೂ ಇದ್ದೀವಿ ರಾಧೆಯರು, ಗೋಪಿಕೆಯರು ಮನೆಮನೆಯಲ್ಲಿ, ಗಲ್ಲಿಗಲ್ಲಿಯಲಿ...
ಇಲ್ಲಿಯೂ ಇದೆ ಗೋಕುಲ, ನದಿ, ಬೃಂದಾವನ, ಗೋವು ಎಲ್ಲವೆಲ್ಲ. ಆದರೇನು...?
ಗೋವುಗಳು ಗೋವುಗಳಲ್ಲ, ಗೋಮುಖದ ವ್ಯಾಘ್ರಗಳು...
ನದಿಯೆಲ್ಲ ಯಮುನೆಯಲ್ಲ, ನದಿಯೊಳಗೆ ನೆತ್ತರಿದೆ....

ಬೃಂದಾವನದಲ್ಲಿ ರಾಧೆಯೀಗ ಒಂಟಿಯಲ್ಲ, ಕಾಯುವಾ ತಪದಲ್ಲಿ ಅವಳಿಗೀಗ ನಂಬಿಕೆಯಿಲ್ಲ....
ನೀನವಳ ವಿರಹಿಯಾಗಿಸಿದೆಯಲ್ಲವೇ ನಿರಂತರ...
ಸಿಕ್ಕಂತೆ, ಸಿಗದಂತೆ ಕಾಡಿಸಿದೆಯಲ್ಲವೇ ಗೋಪಿಕೆಯರ ಹಸಿಹಸಿಹೃದಯಗಳ...
ಮೋಹನರಾಗದಲಿ ಈ ಮಾನಿನಿಯರ ಆಟವಾಡಿಸಿಬಿಟ್ಟೆಯಲ್ಲವೇ...
ಎಷ್ಟೆಂದು ತಪಿಸಿಯಾರು ಮೊಗದೋರದಾ ಚೆಲುವಂಗೆ..?
ಎಷ್ಟೆಂದು ದಹಿಸಿಯಾರು ನಿತ್ಯ ಕಾಮಮರ್ದನವ..?
ಎದೆಯ ಕಣ್ಣೀರಿಗೆ, ಕುದಿಗೆ ಆಸರೆಯಾಗಿ ಒರಗಲೊಂದು ಭುಜವಿಲ್ಲದೆ, ಎದೆಯಿಲ್ಲದೆ
ಎಷ್ಟೆಂದು ಬಾಗುವಾ ಕಾಯವ ನೆಟ್ಟಗಿಟ್ಟಾರು..?
ಇತಿಹಾಸ, ಪುರಾಣ ಕಣ್ಣೆದುರಿಗಿದೆ. ಸೀತೆ ಕಾಡುಪಾಲಾಗಿದ್ದು, ಅಹಲ್ಯೆ ಕಲ್ಲಾದದ್ದು, ಮಂಡೋದರಿ- ಕನಲಿದ್ದು, ಯಶೋಧರೆ ತಪಿಸಿದ್ದು...ಅಯ್ಯೋ ಹೆಣ್ಣ ಸಂಕಟ, ಕುದಿಯೇ...!

'ನಾವು ಈ ಎಲ್ಲರಂತಲ್ಲ, ನಮ್ಮ ಆದರ್ಶ ಇಲ್ಲಿದೆ' ಎನ್ನುತ್ತ,
ಸಿಡಿಯುತ್ತಿದ್ದಾರೆ ಅಂಬೆಯಂತೆ,
ಕುದಿಯುತ್ತಿದ್ದಾರೆ ಜ್ವಾಲೆಯಂತೆ,
ಆದರೆ, ಆದರೆ....
ಸೇಡು ಹೊಸೆಯಲು ಹೊರಟು ಹೊಸ್ತಿಲ ದಾಟುವಾತುರದಲ್ಲಿ ಎಡವುತ್ತಿದ್ದಾರೆ...
ಯಮುನೆಯೊಳಗೆ ಇಳಿಯುತಿದ್ದಾರೆ,
ಕಾಳಿಂದೀಮಡುವಲ್ಲಿ ಧುಮುಕುತಿದ್ದಾರೆ,
ಮಂಗಳಸೂತ್ರಕೆ ಮಂಗಳ ಹಾಡುತಿದ್ದಾರೆ,
ನಿನ್ನಂತೆ ಹತ್ತುಕೃಷ್ಣರ ಹುಡುಕುತ್ತಿದ್ದಾರೆ,
ಕೀಚಕ, ರಾವಣ, ದುಶ್ಯಾಸನರ ನಂಬುತ್ತಿದ್ದಾರೆ,
ಸೀರೆಸೆಳೆವ ಕೈಗೆ ತಾವಾಗೇ ಚುಂಗು ನೀಡುತ್ತಿದ್ದಾರೆ,
ಮತ್ತೀಗ, ನೂರು ತೆರನ ಹಾಡು, ಪಾಡು, ಸಂಕಟ...!
ನೀನೊಂದು ರೀತಿಯಲಿ ಕಾಡಿದೆ,
ಮತ್ತಿವರು ಮತ್ತೆ ಹತ್ತುಹಲವು ರೀತಿಯಲಿ....!
ಮೇಲೇಳುವುದು ದುಸ್ತರವೋ ಕೃಷ್ಣಾ......

ಅಯ್ಯೋ, ನೀರೆಯರು ಜಾರುತ್ತಿದ್ದಾರೆ, ಉರಿವ ನಾಲಿಗೆಯೆದುರು ಉದುರುವಾ ಪತಂಗವಾಗುತ್ತಿದ್ದಾರೆ..
ದ್ವಾಪರದ ಯುಗವಲ್ಲವೋ ಕೃಷ್ಣಾ ಇದು, ಆಧ್ಯಾತ್ಮಬಂಧುವಾಗಲು...!
ತ್ರೇತೆಯಲ್ಲವೋ ಕೃಷ್ಣಾ ಇದು, ಕಾಡು, ಬೆಂಕಿ, ಪಾತಾಳಕೆ ಆಹಾರವಾಗಲು...!
ಕಳ್ಳಕೃಷ್ಣರಿಗೆ ಬುದ್ಧಿಕೊಡು ಹುಸಿಗೊಳಲನೂದಿ ಕಾಡದಂತೆ,
ಹೆಣ್ಣಿಗೆ ಅಭಯವರ ನೀಡು ಜಾರದಂತೆ,
ಊದು ಸ್ವಚ್ಛಬಿದಿರಕೊಳಲನೊಮ್ಮೆ, ಮನಗಳ ಮಲಿನ ಕಳೆವಂತೆ.
ನಾವು ಹಸಿರಾಗಬೇಕು...
ಜಗಸೃಷ್ಟಿಯ ಉಸಿರಾಗಬೇಕು....

*          *            *          *

                                                ಎಸ್. ಪಿ. ವಿಜಯಲಕ್ಷ್ಮಿ
                                        ಫ್ಲಾಟ್ ನಂ.305, ಚಾರ್ಟರ್ಡಮಡಿ
                                           ಮೊ....9980712738





ಸೋಮವಾರ, ಮೇ 11, 2015

ಹೀಗೊಂದು ಪ್ರೇಮಕಥೆ


                                                              ಹೀಗೊಂದು ಪ್ರೇಮಕಥೆ 
ನೀ ಮುಡಿದಾ ಮಲ್ಲಿಗೆಹೂವಿನ ಮಾಲೆ......

'ಅಲ್ಲಿ ಅರಳಿದೆ ಹೂವು ಮಕರಂದ ತುಂಬಿ
ಇಲ್ಲಿ ಬಾಯಾರಿ ಹಾರಾಡುತಿದೆ ದುಂಬಿ.
ಅಂತರವೋ, ಮೈಲಿಮೈಲಿಗಳ ಕಂಬಿ
ಅಲ್ಲಾಡದಿರುವ ಕಬ್ಬಿಣದ ಕಂಬಿ
ದೇಶವನು ಕಾಲ ಗೆಲ್ಲುವುದೆಂದುನಂಬಿ
ಆಸೆ ಕುಳಿತಿಹುದಿಲ್ಲಿ ಸ್ವಪ್ನಚುಂಬಿ.' 
ಹೌದು,....ಇಂದಿಗೆ ತಿಂಗಳ ಕೆಳಗೆ....ನಿನ್ನನ್ನು ನಾನು ಮೊದಲಬಾರಿಗೆ ನೋಡಿದ್ದು....ಆ ದೇವಸ್ಥಾನದಲ್ಲಿ.  ಶಿವನ ಎದುರು  ಕೈಮುಗಿದು ನಿಂತ ನನ್ನ  ಕಣ್ಣೆದುರು ಮಿಂಚಿನಂತೆ ನೀನು ಹಾದುಹೋಗಿದ್ದೆ. ಮತ್ತೊಮ್ಮೆ ನೋಡಲು ಸಿಗಬಾರದೇ...?ಕ್ಷಣದಲ್ಲಿ ಕಂಪನ ಎಬ್ಬಿಸಿಹೋದ ನಿನ್ನನ್ನು ಕಾಣಿಸುವಂತೆ ಆ ವೈರಾಗ್ಯಪತಿ, ಮನ್ಮಥವೈರಿಯೆದುರು ದೀನನಾಗಿ ಮೊರೆಯಿಟ್ಟೆ. ನಿಜ, ನನ್ನ ಮೊರೆ ಅವನನ್ನು ತಾಕಿತು.ಎಷ್ಟಾದರೂ ಅವನೂ ರಸಿಕನೇ...ಹಾಗಿಲ್ಲದಿದ್ದಿದ್ದರೆ ಗಿರಿಜೆಯನ್ನು ತನ್ನ ತೊಡೆಯಮೇಲೇ ಕೂರಿಸಿಕೊಳ್ಳುತ್ತಿದ್ದನೇ...?ಎಲ್ಲೋ ಮಾಯವಾಗಿದ್ದ ನೀನು ಗಂಟೆಯ ಸದ್ದು ಕೇಳಿದೊಡನೆ ಮಂಗಳಾರತಿಗೆಂದು ಬಂದೆ. ಬಂದವಳು ....ಆಹಾ...ಬಂದವಳು ನನ್ನ ಕಣ್ಣೆದುರು, ಕೈಜೋಡಿಸಿ ನೀನು ನಿಂತ ಪರಿ...ಹೇಗಿತ್ತು ಗೊತ್ತಾ...
'ಚಂದ್ರಿಕಾ ಚಕೋರಿಯಾಗಿ
ಸೌಂದರ್ಯ ಸಾಂದ್ರೆಯಾಗಿ
ಪ್ರೇಯಸೀ ಪ್ರೇಯಸೀ'.....  
                     'ನಾನೆ ನಿನ್ನ ಪ್ರೇಯಸಿ' ಎನ್ನುವಂತೆ ಭಾಸವಾಗಿಬಿಟ್ಟಿತು. ಸುಳ್ಳಲ್ಲವೇ ಗೆಳತಿ....ನಿನ್ನನ್ನು ನಾ ಗೆಳತಿಯೆಂದೇ ಕರೆಯುತ್ತೇನೆ, ಸಧ್ಯಕ್ಕೆ. ಆನಂತರ....ಇರಲಿ, ನಿನ್ನನಲ್ಲಿ ಆ ಭಂಗಿಯಲ್ಲಿ ಕಂಡಾಗ ನನ್ನ ಹೃದಯಪಕ್ಷಿ ಪುಟ್ಟದನಿಯಲ್ಲಿ ಏನೆಂದಿತು ಗೊತ್ತಾ...? ಹೇಳಲೇ...? ಕೇಳಿದಮೇಲೆ 'ಛೇ, ಇವನೆಂಥ ನಾಚಿಕೆಗೆಟ್ಟವ ಎನ್ನಬೇಡ. ಪ್ರೀತಿಸಿದ ಮನಸುಗಳು ಜಗದ ರೀತಿಗಳನ್ನೆಲ್ಲಾ ಮರೆತುಬಿಡುವುದಂತೆ! 
'ಅಮೃತಕಲಶ ತೀರ್ಥಜಲದ
ಮಧುರವಕ್ಷ ಮೃದುಸ್ಥಲದಿ
ಮಲಗಿಸೆನ್ನ ಮುದ್ದಿಸು
ರಸೋನಿದ್ರೆಗದ್ದಿಸು '  
                                 ಕವಿಯಲ್ಲದಿದ್ದರೂ  ಕವಿಮನಸ್ಸು  ನಿನ್ನ  ನೋಡುತ್ತ,  ಮಾನಸಿಕವಾಗಿ  ಹೀಗೆಲ್ಲ  ಕನವರಿಸುತ್ತ      ಅಂಜಲೀಬದ್ಧವಾಗಿ  ನಿನ್ನೆದುರು  ಮಂಡಿಯೂರಿಬಿಟ್ಟಿತು.  ನಾನು  ತಪ್ಪು  ಮಾಡಿದೆನೇ... ನಿಂತಿದ್ದು ತಪೋಮೂರ್ತಿ ಶಿವನ ಇದಿರು,  ಕಲ್ಮಶಕಳೆವ  ವಿರಕ್ತಮೂರ್ತಿಯ  ಇದಿರು,  ಆದರೆ,  ಚಂಚಲಮನ... ಕಲಕಿದಹೃದಯ...  ಪ್ರಣಯಾಲಾಪ...ಹೌದು ಹುಡುಗೀ,  ಈ  ತಾಕಲಾಟ  ಎದೆಯಲ್ಲಿ  ಹರಿದಾಡಿತು. ಆದರೆ,  ಹರೆಯದ  ಹಸಿಬಿಸಿ  ಗೆದ್ದಿತು. ನಾನು ನಿಜಕ್ಕೂ ಆ ದಿನ ಶಿವನ ಭಕ್ತನಾಗಿರಲಿಲ್ಲ,  ಪ್ರೀತಿಗೊಳದಲ್ಲಿ  ಏಕಾಏಕಿ  ಬಿದ್ದಿದ್ದೆ,  ತುಂಬು  ಯವ್ವನಗಾರ್ತಿಯ  ಪ್ರಣಯಾರ್ಥಿಯಾಗಿದ್ದೆ. 
                ನೀನು  ಆ ದಿನ  ಉಟ್ಟಿದ್ದೆ  ಕಡುನೀಲಿಬಣ್ಣದಸೀರೆ.  ದುಂಡುಮುಖದಲ್ಲಿ ಕೆಂಪುಕುಂಕುಮ,  ಗಗನಗೌರಿಯ ಹಣೆಯಮೇಲಿನ   ಮುಂಬೆಳಗಿನ   ಓಕುಳಿಯಸೂರ್ಯನಂತಿತ್ತು.  ಉದ್ದನೆಯ  ನೀಳ ಎರಡುಜಡೆಯಲ್ಲಿ ಮಲ್ಲಿಗೆಹೂವಿನಮಾಲೆ, ಕಾಡಿಗೆಹಚ್ಚಿದ  ಕಪ್ಪುಹೊಳೆವ  ಕಣ್ಣುಗಳು,  ದಂತಬಣ್ಣದ  ದುಂಡುಕೈಗಳಲ್ಲಿ  ಕಿಣಿಕಿಣಿಸುವ  ಹಸಿರುಬಳೆ, ಹಾಲುಹುಣ್ಣಿಮೆಯ ಕೆನ್ನೆಯ ಮೇಲೆ  ಇಳಿಬಿದ್ದ ಆ  ಗುಂಗುರು ಮುಂಗುರುಳು,  ಎಲ್ಲಕ್ಕಿಂತ... ಮೆಲ್ಲಗೆ  ಗುಣಿಗುಣಿಸುತ್ತಿದ್ದೆಯೇನೋ ಹಾಡೊಂದನ್ನು, ಸ್ವಲ್ಪವೇ  ತೆರೆದುಮುಚ್ಚುತ್ತಿದ್ದ ಆ...ಆ... ಸಪೂರ ಚೆಂದುಟಿಗಳು.    ..ನಿಜಕ್ಕೂ  ನನ್ನೆದೆಯಲ್ಲಿ  ಹುಚ್ಚೆದ್ದು  ಕಾಡಿದ ಭಾವಗಳು ಎಷ್ಟು ಗೊತ್ತಾ...? ಅಂದಮೇಲೆ ಮೇಲಿನ ಕವಿಸಾಲುಗಳ ನಾ ಹಚ್ಚಿದ್ದು ಪೋಲೀತನವೆನ್ನುತ್ತೀಯಾ...?
ಓಹ್....! ನಾನು ಬರೆಯುತ್ತಿರೋದು ಪ್ರಥಮಪತ್ರ.....ಹಾಂ, ನಿನಗಾಗಿ ಪ್ರಥಮ ಪ್ರಣಯಪತ್ರ,.  ನಾನು ಈಗಷ್ಟೇ ಕಂಡು, ಕಂಡವಳಿಗೆ ನನ್ನ ಪರಿಚಯವನ್ನೂ ಮಾಡದೆ, ಹೀಗೆಲ್ಲಾ......ಖಂಡಿತಾ ತಪ್ಪು ಗೆಳತಿ. ನಾನೊಬ್ಬ ಸಭ್ಯ, ಸಹೃದಯ, ಶಿಷ್ಟಾಚಾರವಿರುವಂಥ ಹುಡುಗ. ನಿನಗೆ ಪರಿಚಯವಿರುವ ಮನೆಯವನೇ. ನೀನೊಪ್ಪಿದರೆ, ನಿನ್ನನ್ನು, ತೆರೆದಿಟ್ಟಿರುವ ಈ ಎದೆಗೂಡಿನೊಳಗೆ  ಮಲ್ಲಿಗೆಹೂವಿನಷ್ಟು  ಹಗುರವಾಗಿ,  ಪ್ರೀತಿಯಿಂದ  ಬಚ್ಚಿಟ್ಟುಕೊಳ್ಳುತ್ತೇನೆ. ಹೆಜ್ಜೆ ನೋಯದಂತೆ, ಕಾಲ್ಗೆಜ್ಜೆ ಉಲಿಯುತ್ತಲೇ ಇರುವಂತೆ, ಚಂದ್ರಮನ ಚಕೋರಿಯಂತೆ, ಬೆಳದಿಂಗಳ ನಗೆ ಮಾಸದಂತೆ....ಇನ್ನೂ ಇನ್ನೂ ಏನೇನೋ ಹೇಳುವಾಸೆ,ಅದರಂತೆ ಜೀವನದುದ್ದಕ್ಕೂ ನಿನ್ನ ಜೋಪಾನವಾಗಿ ನೋಡಿಕೊಳ್ಳುವ, ಹೆಜ್ಜೆಹಾಕುವ ಆಸೆ. ಆದರೆ, ಕನಸು ದಟ್ಟವಾಗುವಮುನ್ನ... ದಟ್ಟವಾದದ್ದು ಕರಗಿಹೋಗುವ ಮುನ್ನ ಯೋಚಿಸಬೇಕಲ್ಲವೇ....
ಗೆಳತಿ, ನಾನಿಷ್ಟು ಹೇಳಬಲ್ಲೆ, 
         'ಹಿಂದೆ ಜನ್ಮಾಂತರದ ಸಂಜೆಗೆಂಪಿನ ಕೆಳೆಯಲಿ
          ಮೊಳೆತ ಪ್ರೇಮದಮುಗುಳೆ ಈ ಹುಟ್ಟಿನೆಳಹಗಲಿನಲಿ 
          ಮೊದಲನೋಟದ ಭಾನುಕರನ ಸೋಂಕಿಗೆ ಬಿರಿಯಿತು.
          ಹೃದಯ ಪವಾಡವಿದು ಬರಿದೆ ಘಟಿಸುವುದೆಂತು'........
..            ನಿನಗೆ ನನ್ನ  ಹೃದಯದ ಒಳಮಿಡಿತ ಈ ಪದಗಳಲ್ಲಿ ಕಂಡಿರಬಹುದು. 'ನೀನು ನನ್ನ ಕಣ್ಣಿಗೆ ಬಿದ್ದಿದ್ದೇಕೆ...'ಅದು ಜನ್ಮಾಂತರದ ಬಂಧವಿದ್ದೀತು ಎನ್ನುವ ನನ್ನ ಮಾತನ್ನು ಒಪ್ಪುತ್ತೀಯಾ....? ಹಿಂದೆ ಏನಾಗಿದ್ದೆನೋ ಈಗ ಅದು ಕಳೆದಮಾತು. ಮುಂದಿನಬದುಕು ನಿನ್ನೊಂದಿಗೆ....ಇದು ನನ್ನ ಕನಸು, ಅದಮ್ಯ ತುಡಿತ, ಬಾಳಿನ ಸೆಲೆ. ನಿನ್ನಿಂದ, 'ನಾನೂ ನಿನ್ನಂತೆ' ಎನ್ನುವ ಉತ್ತರ ಬಂದೀತಾ...ಬಂದರೆ, ನಾನು ಆಗಸದಲ್ಲಿ ತೇಲಾಡುವ ಮುಗಿಲು, ಬಾರದಿದ್ದರೆ....? ಹಾಗಾಗಬಾರದು. ಭಗ್ನಹೃದಯ ಇದ್ದೂ ಸತ್ತಂತೆ...ಗೆಳತಿ, ನೋವಾಗಿದ್ದರೆ ಕ್ಷಮಿಸು, ಒಂದುಬಾರಿ...ಒಂದುಬಾರಿ ಆಳವಾಗಿ ಈ ಬಗ್ಗೆ ಚಿಂತಿಸು. ನೀನು ಈ ಹೃದಯದೊಳಗೆ ಒಮ್ಮೆ ಕಾಲಿಟ್ಟು ನೋಡು, ಈ ಅರಮನೆಗೆ ರಾಣಿಯಾಗುತ್ತೀಯೆ. ಇದೊಂದು ತಿಂಗಳಲ್ಲೇ ನಾನೆಷ್ಟು ಕನಸಿನ ನವಿರುಬಲೆ ಹೆಣೆದಿಟ್ಟಿದ್ದೀನಿ. ಅದನ್ನು ಕಾಣಲಾದರೂ ಒಮ್ಮೆ ಬಾ ಒಳಗೆ.....     

ನನ್ನ ಮುದ್ದಿನರಗಿಣಿ,  ನನ್ನೊಲವೆ,  ನನ್ನ  ಪ್ರಣಯಸಖಿಯೆ  ಓಹ್..!  ನಾನೀಗ  ಎಷ್ಟು  ರೀತಿಯಲ್ಲಿ  ನಿನ್ನ ಕರೆದರೂ ಬರಡುಪದಗಳೆನಿಸುತ್ತಿದೆ.  ಆದರೆ,  ಹಾಗೆ ಕರೆವ  ಹಕ್ಕೂ  ನನ್ನದಾಗಿದೆ ಅಲ್ಲವೇ....ನಿನ್ನ ಎರಡೇ ಪದಗಳ ಆ ಮೇಘಸಂದೇಶ ಬಂದಾಗ, ನಾನು ನಾನಾಗಿರಲೇ  ಇಲ್ಲ  ಗೆಳತಿ.   ಪಂಚಮವೇದದ  ತುತ್ತತುದಿಯಲ್ಲಿ  ನಾನೊಬ್ಬನೇ....ನನ್ನ ತೋಳ್ತೆಕ್ಕೆಯಲ್ಲಿ ಹಗುರಹೂವಿನ  ಹಡಗು...ನೀನೊಬ್ಬಳೇ...ನನ್ನ ಆ  ದಿನದ  ಶಿವನ  ಮುಂದಿನ  ಪ್ರಾರ್ಥನೆ  ಸುಳ್ಳಾಗಲಿಲ್ಲ. ಈಗಾಗಲೇ ನಮ್ಮೊಲವಿನ  ಪ್ರಣಯಾಂಕುರವಾಗಿ   ಎರಡು  ವರ್ಷಗಳೇ  ಕಳೆದಿವೆ. ಒಂದಾಗುವ  ದಿನ  ದೂರವೇನಿಲ್ಲ. ಎಲ್ಲಕ್ಕೂ ಕಾಲ ಪಕ್ವವಾಗಬೇಕು  ತಾನೇ...ಇದೂ  ಒಳ್ಳೆಯದೇ. ಈಗ  ನೋಡು  ನಮ್ಮೊಳಗಿನ ಈ  ಮೇಘಸಂದೇಶಗಳು  ಹೊಸತೊಂದು ಪ್ರೇಮಲೋಕವನ್ನೇ  ಸೃಷ್ಟಿಸಿಬಿಟ್ಟಿದೆ.  ಪ್ರತಿಯೊಬ್ಬ  ಪ್ರೇಮಿಯ  ಬದುಕಿನಲ್ಲಿ  ಇದೊಂದು  ಸುಂದರಕಾವ್ಯ. ಸಪ್ತಪದಿ ಈ ಕಾವ್ಯದ ಗುರಿ.  ಅದು  ನಮ್ಮ ಪ್ರೇಮವನ್ನು  ಗಟ್ಟಿಗೊಳಿಸುತ್ತಲೇ  ಹೋಗುವ  ಸುಮಧುರಪಯಣ. ಅದಕ್ಕೇ ಈ ಕಾವ್ಯದ ಪ್ರತಿ ಅಕ್ಷರವನ್ನೂ  ಜೇನಿನಂತೆ  ಸವಿದುಬಿಡೋಣ,  ಏನಂತೀ...? ನಿನ್ನ ನನ್ನ ನಡುವಣ ಈ  ಪ್ರೇಮಪತ್ರದ  ಹಾದಿ ಎಷ್ಟು ಚಂದ ಅಲ್ವಾ...ಪತ್ರಕ್ಕೆ  ಕಾಯುವ ಕ್ಷಣ,  ಘಳಿಗೆಗಳು, ಆ  ಕಾತರ, ಆಹಾ...ಈಗ ಆ  ಅಂಚೆಯವ  ಅದೆಷ್ಟು  ಆತ್ಮೀಯನಾಗಿ ಕಾಣುತ್ತಿದ್ದಾನೆ.
         ಆದಿನ, ನಾನು ಸಾವಿರ ಸಾವಿರ ನಿರೀಕ್ಷೆ ಕಟ್ಟಿಕೊಂಡು ಬಂದಿದ್ದ ಆದಿನ...ನನ್ನ ಮನೆಗೇ ನೀ ಬಂದಿದ್ದೆ. ಎದುರಿಗೇ ಇದ್ದೆ. ಎಲ್ಲರ ಕಣ್ತಪ್ಪಿಸಿ ನಿನ್ನನ್ನು ಮತ್ತೆಮತ್ತೆ ನೋಡುವ, ನೋಟದಿಂದಲೇ ಕರಗಿಸಿ ಎದೆಯಲ್ಲಿ ಹುದುಗಿಸಿಕೊಳ್ಳುವ ಆ ಹರಸಾಹಸ.....ನಿನ್ನ ಪಾಡೂ ಇದೇ ಆಗಿತ್ತು ನಾ ಬಲ್ಲೆ ಹುಡುಗಿ. ನೂರು ಜನರ ಮಧ್ಯೆ ನನ್ನ ಬಳಿಯಲ್ಲಿ ನೀ ಹಾದುಹೋಗುವಾಗೊಮ್ಮೆ, 'ನಾನೂ ನಿನ್ನಂತೆ'....ಪಿಸುಗಿದ ಆ ನಿನ್ನ ಜೇನ್ದನಿ....ಅಬ್ಬಾ..! ಹುಚ್ಚಾಗಿ ಬಿರಿದೇ ಹೋಯ್ತೇನೋ ಎನ್ನುವಂತಾದ ಎದೆ, ಮನಸ್ಸನ್ನು ನಾ ಸಂಭಾಳಿಸಿದ ಪರಿ .. ನಿಜ ಹೇಳಲಾ...ಹಾಗೇ ನಿನ್ನ ತಬ್ಬಿಬಿಡಬೇಕೆನ್ನಿಸುವಂತೆ ನನ್ನ ಕೈಗಳು ಅನಾಯಾಸವಾಗಿ ಮುಂಚಾಚಿತ್ತು, ಆದರೆ, ಬಿಡು ...ನೀ ಬಲು ಜಾಣೆಯೇ ಸರಿ, ಎಲ್ಲೋ ಮಾಯವಾಗಿಬಿಟ್ಟೆ. ಹಾಗಾಗದಿದ್ದರೆ, ಆದಿನವೇ ಜಗಜ್ಜಾಹೀರಾಗುತ್ತಿತ್ತ್ತು ಅಲ್ಲವಾ...
                 ಅಂತೂ ಒಲವಿಗೆ ಒಲವಿನ ಮುದ್ರೆ ಬಿದ್ದೇಬಿಟ್ಟಿತು.........
ಅದೊಂದುದಿನ  ನೀನು ಆ  ಸಾಗರದಡದಲ್ಲಿ,  ಸಾಗರಿಕೆಯಾಗಿ  ಕಾಣಿಸಿಕೊಂಡ  ದಿನ...ಎಂಥ  ಅನಿರೀಕ್ಷಿತ, ಆನಂದಮಯ  ಭೇಟಿ  ಅದಾಗಿತ್ತು. ಇಳಿಯುವ  ಸೂರ್ಯನಿಗೆದುರಾಗಿ ಆ  ಮರಳದಿನ್ನೆಯ  ಮೇಲೆ  ಕುಳಿತಿದ್ದೆ ನೀನು ಮತ್ಸ್ಯಕನ್ಯೆಯ  ಹಾಗೆ.  ಎದೆಯ ಮೇಲೆ  ಮಲಗಿದ್ದ ಆ  ಹಾವಿನಂಥ  ಕಪ್ಪುಜಡೆ, ಕೆಳಗಿಳಿದಿದ್ದ  ಅರ್ಧನಿಮೀಲಿತ ನೇತ್ರ, ಹಣೆ-ಮೂಗಿನ ತುದಿಯ  ನವಿರಾದ  ಬೆವರು, ಮರಳಲ್ಲಾಡುತ್ತಿದ್ದ  ಚಿಗುರುಬೆರಳು, ಗಾಳಿಗೆ  ಹಾರಾಡುತ್ತಿದ್ದ ಮುಂಗುರುಳು, ಉಟ್ಟಿದ್ದ ಗುಲಾಬಿಬಣ್ಣದ ಸೀರೆ....ಓಹ್! ನೀನು ಚೆಂಗುಲಾಬಿಯಷ್ಟೇ  ರೂಪಿಣಿಯಾಗಿ  ನನ್ನ ಹಾಗೇ  ಸೆಳೆದುಬಿಟ್ಟಿದ್ದೆ. 'ಕಡಲು ನದಿಯ ಸೆಳೆವುದು' ಎನ್ನುವುದು  ಜಗದ  ಸತ್ಯ, 'ಕಡಲು ಪುರುಷ-ನದಿ ಹೆಣ್ಣು' ಎನ್ನುವುದೂ  ಜಗವೇ  ಒಪ್ಪಿಕೊಂಡ  ಇನ್ನೊಂದು  ಸತ್ಯ. ಆದರಿಲ್ಲಿ ನದಿಯಾದ  ನೀನು  ಕಡಲಾದ  ನನ್ನನ್ನೇ  ಸೆಳೆದುಬಿಟ್ಟಿದ್ದೆ.  ಅದೂ,  ಈ  ಸೆಳೆತ  ಅಂತಿಂಥ  ಸೆಳೆತವಲ್ಲ,  ಮತ್ತೆಂದೂ ಬೇರಾಗದಂಥ,  ಎರಡು  ಒಂದೇಆಗಿ  ಎರಡು  ಇನ್ನಿಲ್ಲವಾದಂಥ  ಸೆಳೆತ.  ನಾನು  ಹತ್ತಿರ  ಬಂದೆ,  ನಿನ್ನ  ಮುಖದ  ತುಂಬಾ ಸಂಜೆಯ ಮೋಹನರಾಗದ ಕೆಂಪು....ಉಕ್ಕಿಬಂದ  ಉನ್ಮಾದದಲ್ಲಿ  ನಿನ್ನ  ಹೆಸರ್ಹಿಡಿದು  ಕರೆದೆ.  ಬೆಚ್ಚಿ  ಬೆವರಿಬಿಟ್ಟೆ  ನೀನು. ಮುಂದೆ.....ಏನಾಯಿತೇ ಹುಡುಗಿ.....ನಿನ್ನ  ನಾ  ನೋಡುತ್ತ-ನನ್ನ ನೀ  ನೋಡುತ್ತ  ಗಂಟೆಗಳು  ಉರುಳಿದವು,  ಕಣ್ಣು ಕಣ್ಣುಗಳು ಅದೆಷ್ಟು  ಮಾತಾಡಿದವು,  'ಮನಸು ಮನಸು'ಗಳು  ಪರಸ್ಪರ  ದೇಹಗಳ  ಬದಲಾಯಿಸಿಕೊಂಡವು.  ನಮ್ಮಿಬ್ಬರನ್ನುಳಿದ ಬೇರೆಲ್ಲವನ್ನೂ   ಪವಿತ್ರ ಪ್ರೇಮ  ಮಾಯವಾಗಿಸಿಬಿಟ್ಟಿತು. ನಿಜ ಗೆಳತಿ,  ಹರಯದ ಗುಂಗಿಗೆ  ಅದೇ ಸಾಟಿ. ಆ ಲೋಕದ ರಂಗಿಗೆ  ಅದೇ ಸಾಟಿ. ಅಲ್ಲಿ ಮೂಡುವ  ಕಾಮನಬಿಲ್ಲಿಗೆ ಆ  ಮದನರತಿ ಮಾತ್ರ  ಸಾಟಿ. ಮಿಕ್ಕೆಲ್ಲ  ಮಿಥ್ಯವೆನ್ನಿಸಿಬಿಡುವ  ಸತ್ಯ. ಆದರೆ,  ಸಮಾಜ,  ರೀತಿರಿವಾಜು,  ಸಂಸ್ಕಾರ ಈ  ಏಣಿ  ತಳ್ಳುವುದು  ಸರಿಯಲ್ಲ  ಎನ್ನುವ  ನಮ್ಮಿಬ್ಬರ  ಎಚ್ಚರಿಕೆ, ಪ್ರೀತಿಯ ಅಮಲಿನ  ಮಧ್ಯೆ  ಇಟ್ಟ  ತಡೆಗೋಡೆಯಂತಿತ್ತು,  ನಾವು  ದಾಟಲಿಲ್ಲ,  ದಾಟಲಿಲ್ಲವೆಂಬ  ಬೇಸರವೂ  ಇಲ್ಲ.  ಇದು ಅಗತ್ಯ   ಅಲ್ಲವೇ....? ಹಿರಿಯರ  ಒಪ್ಪಿಗೆಯ  ಭದ್ರಬುನಾದಿಯ  ಮೇಲೆ    ಪ್ರೇಮಸೌಧ  ಗಟ್ಟಿಯಾಗುವುದೇ ಒಳ್ಳೆಯದು.....
           ಆ...ಮತ್ತೊಂದು ದಿನ... ಹಿರಿಯರ  ಒಪ್ಪಿಗೆ  ಬೀಳುವುದೇ  ಎಂಬ  ಕಾತರದ  ದಿನಗಳಲ್ಲಿ,  ಎಲ್ಲಿ  ಕನಸು  ಭಗ್ನವಾದೀತೋ  ಎಂಬ  ತಳಮಳದಲ್ಲಿ,  ಆ  ಶಿವಾಲಯದ  ಹಿಂದಿನ  ಅಶ್ವತ್ಥವೃಕ್ಷದಡಿಯಲ್ಲಿ  ನಾನು  ಕಾದಿದ್ದೆ  ನನ್ನೊಲವಿನ ನಿರೀಕ್ಷೆಯಲ್ಲಿ.  ಬಂದಳು  ರಾಧೆ,  ಕೈಯ್ಯಲ್ಲಿತ್ತು  ನನಗಾಗಿ  ತಂದ  ಒಲವಿನ  ಕಾಣಿಕೆ.  ಕಣ್ಣತುಂಬ  ತೆಳ್ಳನೆ  ನೀರಪಸೆ, ಯಾವ ದುಗುಡ  ಹೊತ್ತಿತ್ತೋ ಆ  ಪುಟ್ಟಹೃದಯದ  ತುಂಬಾ... ನಡುಗುವ  ಕೈಯ್ಯಿಂದ ಆ  ವಸ್ತುಗಳ  ನನ್ನ  ಕೈಗಿತ್ತಳು. ಜನ್ಮಜನ್ಮಕ್ಕಾಗುವಷ್ಟು  ಪ್ರೀತಿ  ತುಳುಕಿಸುವ  ನೋಟವೆಸೆದಳು.  ನನ್ನನ್ನು  ತನ್ನೆದೆತುಂಬಾ  ತುಂಬಿಕೊಂಡು,  ತನ್ನ ಅಮಲ, ಅಸೀಮ ಚೆಲುವು- ಪ್ರೀತಿಯ  ನೋಟವನ್ನು  ನನ್ನೊಳಗೆ  ತುಂಬಿಸಿ  ಮಾಯವಾಗೇಬಿಟ್ಟಳು  ಸಂಜೆಯಸೂರ್ಯನಂತೆ......                          
                   'ಕೊಳಲನೂದುವ ಕೃಷ್ಣ'....'ನೋಡಿದೆ,  ನನ್ನೊಳಗೇ  ನುಡಿದೆ, 'ಮರುಗಬೇಡವೇ  ಗೆಳತಿ,  ಈ ಕೃಷ್ಣ-ಈ ಕೊಳಲು-ಈ ಗಾನ ಇದು ನಿನಗಾಗಿ ಮಾತ್ರ. ಈ ಜನ್ಮವೇನು, ಮುಂದಕ್ಕೂ ಕೂಡ'..ಈ ಹೃದಯದ ಪ್ರೀತಿ ತುಂಬಿದ ಮೂಕಮರ್ಮರ ಅವಳಿಗಲ್ಲದೆ ಬೇರಾರಿಗೆ ಕೇಳಿಸೀತು..? ಒಮ್ಮೆ ಹಿಂತಿರುಗಿದ್ದೆ ನೀನು ಕೇಳಿಸಿತೋ ಎನ್ನುವಂತೆ. ಕೃಷ್ಣನನ್ನು ನಾ ಎದೆಗೊತ್ತಿಕೊಂಡೆ ಅದು ನೀನೇ ಎಂಬಂತೆ.  ಕಣ್ಣಂಚಿನಲ್ಲಿ ವಿರಹದ, ಪ್ರೇಮ ಭಗ್ನವಾದರೆ...ಎಂಬ ನೋವಿತ್ತೇನೋ....                ಬೆರಳತುದಿಯಲ್ಲಿ ಆ ಪಸೆಯ ಒತ್ತಿ ತಟ್ಟನೆ ಹಾರಿಸಿದೆ ನೀನು.   ಮರುಕ್ಷಣವೇ  ನಿನ್ನ ಪೌರ್ಣಮಿಯಮೊಗದ ತುಂಬಾ ಅರಳಿದ ಆ ಮಂದಹಾಸ ಎಂದೂ ಮರೆಯದ್ದು......
ನೀನೇನೇ ಹೇಳು, ಈ ಮೊಬೈಲ್ಲು, ಟೆಕ್ಸ್ಟ್ ಮೆಸೇಜು, ಈ-ಮೇಲು, ಫೇಸ್ ಬುಕ್ಕು ಇವುಗಳ ಆಕಾಶಮಾರ್ಗದ ಕಣ್ಣು, ಕಿವಿ, ಮುಖಗಳ ಅಗೋಚರ ಸಂಪರ್ಕದ ಲವ್ವಿಗಿಂತ ನಾವು ಅನುಭವಿಸಿದ ಆ ಹರಯದ  ಬಿಸಿಬಿಸಿಪ್ರೇಮ-ಪ್ರಣಯ, ಕದ್ದುಮುಚ್ಚಿ  ನಡೆಸಿದ  ಭೇಟಿಯಲ್ಲೂ 'ಟಚ್ ಮಿ ನಾಟ್' ' ಎಂಬ  ಲಕ್ಷ್ಮಣರೇಖೆ  ನಿಜಕ್ಕೂ  ಅದೆಂತ  ಸೊಗಸಿನದ್ದು  ಅಲ್ಲವೇ...? ನಿನ್ನ  ಬೆರಳಅಂಚಿನಲ್ಲಿ   ಕಲೆತುನಿಂತ  ಆ   ಪ್ರೇಮವಾಹಿನಿಯ   ಸಂಚಲನ   ಪ್ರೇಮಪತ್ರಗಳಲ್ಲಿ   ಹರಿದು   ನನ್ನೆದೆಯ ತೋಯಿಸಿಬಿಡುತ್ತಿದ್ದ  ಆ  ಸಂವಹನ  ಕ್ರಿಯೆ,  ಆ  ಪತ್ರಗಳ  ತಂದಿತ್ತು  ತುಂಟನೋಟವೆಸೆಯುತ್ತಿದ್ದ ಆ  ಅಂಚೆಯವ.....ಓಹ್! ಆ ಭಾಗ್ಯ ಇಂದೆಲ್ಲಿ...?  ಓದಿಓದಿ ಹಳತಾಗಿ,  ಹಳದಿಬಣ್ಣಕ್ಕೆ   ತಿರುಗಿದ ಈ  ಪತ್ರಗಳ  ನಿನ್ನೆದುರು  ಒಮ್ಮೆ  ಬಿಡಿಸಿಟ್ಟುಬಿಟ್ಟರೆ ಸಾಕು,  ನಿನ್ನಲ್ಲಿ  ಮತ್ತದೇ  ಸಂಜೆಯ  ರಾಗರಂಗು.....ಒಮ್ಮೆ  ತುಟಿಯುಬ್ಬಿಸಿ,  ಕೊರಳಕೊಂಕಿಸಿ,  'ಬಿಡಿ,  ನಿಮ್ಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ'  ಎನ್ನುತ್ತ ನೀ  ನುಣುಚಿಕೊಳ್ಳುತ್ತೀಯ.  ಆದರೆ,  ನಿನ್ನ ಕಣ್ಣೊಳಗು  ಅದೇ '1942 ಎ ಲವ್ ಸ್ಟೋರಿ' ಯ ಮಥನ  ಮಾಡುತ್ತಿದೆಯೆನ್ನುವುದನ್ನು  ನಿನ್ನಿಂದ  ಮುಚ್ಚಿಡಲು  ಸಾಧ್ಯವೇ ಇಲ್ಲ  ಬಿಡು....ಹಿರಿಯರ ಒಪ್ಪಿಗೆಮುದ್ರೆ ಬಿದ್ದು .'ಹಸಿಹಸಿಯಾದ  ಹರಯ-ಗುರಿಕಂಡ ಸಪ್ತಪದಿ'  ಇದಲ್ಲವೇನೆ  ಸಾರ್ಥಕಬಾಳು......
'ಎನ್ನ ರನ್ನೆ ಎನ್ನನೊಲಿದು
ಎನ್ನ ಬಾಳಬೆಳಕು ಎನಿಸಿ
ಕಣ್ಣಮುಂದೆ ಮಿಂಚಿಮೆರೆದು ಸೆಳೆದಳೆನ್ನನು
ಎನ್ನ ಮಬ್ಬುಎದೆಗೆ ಒಲವ ಬೆಳಕ ಕರೆದಳು.'

                                                                         * * * *

                                                                             ವ್ಯಾಲೆಂಟೀನ್ಸ್ ಡೇ  ಗೆ  ಪತ್ರಿಕೆಗೆ  ಬರೆದ ಲೇಖನ   

                                                                        


                                                   





ಸೋಮವಾರ, ಮಾರ್ಚ್ 23, 2015

'ನಾರ್ವೇಜಿಯನ್ ಪರ್ಲ್'......ಎಂಬ ಮುತ್ತಿನ ಸುಂದರಿ

                

               ಟೈಟಾನಿಕ್ ಹಡಗಿನ ದುರಂತಕ್ಕೆ ಈಗಾಗಲೇ ನೂರು ವರ್ಷ ತುಂಬಿದೆ.  
ಈ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳಲ್ಲೂ ಬಿತ್ತರವಾದ ವಿಸ್ತ್ರುತ ವರದಿಯನ್ನು ಜನತೆ ವೀಕ್ಷಿಸಿತು . ವರದಿ , ಫೋಟೋಗಳು , ಕಥೆ , ಹಿನ್ನೆಲೆ , ಬದುಕುಳಿದವರ ಅನುಭವ...ಅಬ್ಬಾ ! ಈ ಹಿಂದೆಯೇ ನಾನು ಈ ಹೆಸರಿನ ಸಿನೆಮಾವನ್ನು ನೋಡಿದ್ದೆ .  ಆ 'ಟೈಟಾನಿಕ್ ' ಸಿನಿಮಾದಲ್ಲಂತೂ ಇಡೀ ಹಡಗಿನ ವೈಭವ , ಸಾಗರದ ಅಪಾರ ಜಲರಾಶಿಯ ಭವ್ಯತೆ ಎಲ್ಲ ಕಂಡಾಗ , ಛೇ, ಒಮ್ಮೆಯಾದರೂ ಈ ಹಡಗಿನ ಪ್ರವಾಸ ನನ್ನ ಪಾಲಿಗೆ ಸಿಕ್ಕುವುದೇ ಎಂಬ ಕನಸುಕಟ್ಟಿಕೊಂಡಿದ್ದೆ. 

       ಕನಸು ನನಸಾಗುವ ಕಾಲವೇನೋ  ಬಂದೇಬಿಟ್ಟಿತು. ಆಗಮಾತ್ರ ಮೈಯಲ್ಲೊಂದು ತೆಳ್ಳಗಿನ ನಡುಕ ಹುಟ್ಟಿಕೊಂಡುಬಿಟ್ಟಿತು . ಸಿನಿಮಾದಲ್ಲಿ ಆ ಹಡಗು ಮುಳುಗಲಾರಂಭಿಸಿದ ದೃಶ್ಯಗಳೇ ಕೂತಲ್ಲಿ ನಿಂತಲ್ಲಿ ಕಾಡಿಸಿ , ಹೋಗಲೇ ಬೇಡವೇ ಎಂಬ ಸಂದಿಗ್ಧವೇ ಹೈರಾಣಾಗಿಸಿತು. ಹಿಂದೆಯೇ , ಛೇ, ಇದೆಂಥ ಹುಚ್ಚುಕಲ್ಪನೆ . ಅವಘಡ ಹಣೆಯಲ್ಲಿ ಬರೆದಿದ್ದರೆ ಯಾರಿಂದ ತಪ್ಪಿಸಲಾದೀತು  ಎಂದು ಈ ಭ್ರಮೆಯ ಬಗ್ಗೆ ನಗುವೂ ಬಂದಿತು. ಇಂಥಾ ಅವಕಾಶ ನನ್ನದಾಗಿರುವಾಗ ಈ ಪೊಳ್ಳುಕಲ್ಪನೆಗಳಲ್ಲಿ ಹಿಂಜರಿತ ಇರಬಾರದು ಎಂದು ತಯ್ಯಾರಾದೆ. ಹೌದು , ಸುಂದರವಾದ ಹಿಮನಾಡು 'ಅಲಾಸ್ಕಾ'ಗೆ ನಾನು ಪ್ರವಾಸ ಹೊರಟೇಬಿಟ್ಟೆ.  ಯಾವುದರಲ್ಲಿ ಎನ್ನುವಿರಾ... ? 'ಮುತ್ತಿನ ಸುಂದರಿ ' ಅಂದರೆ 'ನಾರ್ವೇಜಿಯನ್ ಪರ್ಲ್' ಎಂಬ ಸುಸಜ್ಜಿತ, ವೈಭವೋಪೇತವಾದ ಹಡಗಿನಲ್ಲಿ ಬರೋಬ್ಬರಿ ಎಂಟುದಿನಗಳ ಯಾನ. ಇದೊಂದು ಕೇವಲ ಹಡಗಲ್ಲ, ಇಂದ್ರನಗರಿ, ಮಾಯಾಲೋಕ. ಬನ್ನಿ, ಇದು ಹೇಗಿದೆ ಎನ್ನುವುದನ್ನು , ಇದರಲ್ಲಿ ಪಯಣಿಸಿ ಕಂಡ 'ಅಧ್ಭುತಗಳ' ಕಿರುಪರಿಚಯದ ಝಲಕ್ಕನ್ನು ನೀವೂ ನೋಡಿ .

ನಾರ್ವೇಜಿಯನ್ ಪರ್ಲ್.....

                 ನಾರ್ವೇಒಡೆತನದ,  ಈ ಹೆಸರುಹೊತ್ತ  ವೈಭವೋಪೇತವಾದ , ಸುಸಜ್ಜಿತ ಹಡಗಿನ ರಚನೆ 2005ರಲ್ಲಿ ಪ್ರಾರಂಭವಾಗಿ ,ಮೊದಲಬಾರಿಗೆ 2006ರಲ್ಲಿ ಕಾರ್ಯ ಆರಂಭಿಸಿತು . ಈ ಹಡಗಿನ ಉದ್ದ  965 ಅಡಿ, ಅಗಲ 125 ಅಡಿ . ಇಲ್ಲಿರುವ ಡೆಕ್ಕುಗಳು ( ಅಂತಸ್ತು ) ಹದಿನೈದು . ಇದು  3000 ಮಂದಿ ಪ್ರವಾಸಿಗರು , 1100ರಷ್ಟು ಸಿಬ್ಬಂದಿವರ್ಗದವರನ್ನು ತನ್ನೊಳಗಿಟ್ಟುಕೊಂಡು ಪಯಣ ಪ್ರಾರಂಭಿಸುತ್ತದೆ . ಈ ಹಡಗಿನ ತೂಕ 93,502 ಟನ್ ಕೆ.ಜಿ.  ಹಡಗುಗಳ ನಿಲ್ದಾಣವನ್ನು ಪೋರ್ಟ್ ಎಂದೂ, ಒಂದೊಂದೇ ಹಡಗುನಿಲ್ಲುವ ಪ್ರತ್ಯೇಕ ಸ್ಥಳವನ್ನು ಪಿಯರ್ ಎಂದೂ ಕರೆಯುತ್ತಾರೆ .  
                 ಈ ಹಡಗುಗಳ ಪ್ರವೇಶವೂ ವಿಮಾನಪ್ರಯಾಣದಷ್ಟೇ ದೀರ್ಘ ನಿಯಮಗಳನ್ನು ಹೊಂದಿರುತ್ತದೆ . ಪೋರ್ಟ್‍ಗೆ ಬಂದಮೇಲೆ ನಾವು ನಮ್ಮ ಗುಂಪಿನ ಮ್ಯಾನೇಜರ್ ಜೊತೆ, ನಮ್ಮ ಲಗೇಜ್‍ಗಳಿಗೆ, ಅಲ್ಲಿ  ಕೊಡುವ ಟ್ಯಾಗ್‍ಗಳನ್ನು ಹಾಕಿ ಅಲ್ಲಿಯ ಸಿಬ್ಬಂದಿಗೆ ಕೊಟ್ಟರೆ ಮುಗಿಯಿತು.  ನಾವು ಫ್ರೀ . ಮುಂದೆ ಅವು ಸೇಫ್ ಆಗಿ ನಮಗೆ ಅಲಾಟ್ ಆಗಿರುವ ರೂಮಿಗೆ ನಾಲ್ಕೈದು ಗಂಟೆಯೊಳಗೆ ತಲುಪುತ್ತದೆ . ಈಗ ನಾವು ಉದ್ದುದ್ದದ ಎಸ್ಕಲೇಟರ್‍ಗಳನ್ನು  ಕ್ಯೂನಲ್ಲಿ ಏರಿ ಪಾಸ್‍ಪೋರ್ಟ ತಪಾಸಣೆಗೆ ನಿಲ್ಲಬೇಕು . ಚೆಕ್‍ಇನ್ ಕಟ್ಟಳೆ ಮುಗಿದಮೇಲೆ ಪಾಸ್‍ಪೋರ್ಟ ಅವರ  ಬಳಿಯಲ್ಲೇ  ಇಟ್ಟುಕೊಂಡು ನಮಗೆ 'ನೇಮ್‍ಕಾರ್ಡ್' ಎಂಬ ಬೇರೊಂದು ಕಾರ್ಡ್ ಕೊಡುತ್ತಾರೆ . ಇದು ಬಹಳಮುಖ್ಯ ,ಕಳೆಯುವಂತಿಲ್ಲ . ಕಾರಣ , ಇದು ಐಡೆಂಟಿಟಿ ಕಾರ್ಡ್ , ರೂಮ್ ಕೀ ಕೂಡ ಆಗಿರುತ್ತದೆ .  ಬೇರೆಬೇರೆ ಊರುಗಳಿಗೆ ನಮ್ಮ ಕರೆದೊಯ್ಯುವ ಹಡಗು ಪೋರ್ಟೊಂದರಲ್ಲಿ ಬೆಳಿಗ್ಗೆ ನಿಂತಾಗ , ಆ ಊರುನೋಡಲು ಹಡಗಿನಿಂದ  
ಹೊರಬರಲು ಈ ಕಾರ್ಡ್ ಮೆಷಿನ್ನಿನಲ್ಲಿ ತೂರಿಸಿ ಅದು ಯಸ್ ಎಂದು ತೋರಿಸಿದಮೇಲೇ ಹೊರಬಿಡುತ್ತಾರೆ , ಹಾಗೇ ಒಳಗೆ ಬರುವಾಗ ಕೂಡ . ಇನ್ನು ಹಡಗಿನೊಳಗೆ ಯಾವುದೇ 'ಕ್ಯಾಶ್' ವ್ಯವಹಾರವಿಲ್ಲ . ಹಾಗಾಗಿ ಇಲ್ಲಿಯೇ ನಮಗೆ ಬೇಕೆನಿಸಿದಷ್ಟು ಹಣಕಟ್ಟಿ 'ಕ್ರೆಡಿಟ್‍ಕಾರ್ಡ್' ಕೊಳ್ಳಬೇಕು . ಒಳಗೆ ಏನೇ ಕೊಂಡರೂ ಈ ಕಾರ್ಡಿನಲ್ಲೇ ವ್ಯವಹರಿಸಬೇಕು . ಬೇರೆಬೇರೆ ಊರುಗಳಿಗೆ ನಮ್ಮ ಕರೆದೊಯ್ಯುವ ಹಡಗು ಪೋರ್ಟೊಂದರಲ್ಲಿ ಬೆಳಿಗ್ಗೆ  ಆರೇಳು ಗಂಟೆಗೆ  ಬಂದುನಿಂತಮೇಲೆ ನಾವು ನಮ್ಮ ಬೆಳಗಿನ 'ತರಹೇವಾರಿ ತಿಂಡಿ'ಗಳ ಔತಣಮುಗಿಸಿ , ಆ ಊರನ್ನು ನೋಡಲು ಹೊರಬರುತ್ತೇವೆ . ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಸುತ್ತಾಡಿ ಸಂಜೆ ಐದುಗಂಟೆಯ ಒಳಗೆ ಹಡಗನ್ನೇರಬೇಕು . ಮತ್ತೆ ಆರುಗಂಟೆಯೋ ಅಥವಾ ಕೊಂಚ ಆಕಡೆ ಈಕಡೆಗೋ ಇದು ತನ್ನ ಮುಂದಿನ ಗುರಿಯತ್ತ ಪಯಣ ಪ್ರಾರಂಭಿಸುತ್ತದೆ . 

                 ಇಲ್ಲಿ ಏನಿದೆ ಏನಿಲ್ಲ ಎಂದು  ಕೇಳಿದರೆ 'ಇಲ್ಲ' ಎನ್ನುವುದು ಮಾತ್ರ ಇಲ್ಲವೇಇಲ್ಲ . ಸಾವಿರಾರು ರೂಮುಗಳು, ಅತಿ ವಿಶಾಲವಾದ ರಿಸೆಪ್ಷನ್ ಡೆಸ್ಕ್, ಲಾಂಜ್ ಬಾರ್, ಹನ್ನೆರಡು ರೆಸ್ಟೊರಾಂಟ್‍ಗಳು , ಹದಿನಾಲ್ಕು ಬಾರ್‍ಗಳು , ಬಾಸ್ಕೆಟ್ ಬಾಲ್-ವಾಲಿಬಾಲ್- ರಾಕ್ ಕ್ಲೈಂಬಿಂಗ್ ಆಟಗಳ ಕೋರ್ಟುಗಳು, ಫಿಟ್‍ನೆಸ್‍ಸೆಂಟರ್ , ಜಾಗಿಂಗ್ ಟ್ರಾಕ್ , ಮಕ್ಕಳಿಗೆ,ದೊಡ್ಡವರಿಗೆ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್ , ಬ್ಯೂಟಿಪಾರ್ಲರ್ , ಯೋಗ , ಏರೋಬಿಕ್ಸ್ , ಕ್ಯಾಸಿನೊ , ಟೀನ್ ಸೆಂಟರ್, ಕಿಡ್ ಸೆಂಟರ್ , ಸುಸಜ್ಜಿತ ಲೈಬ್ರರಿ , ಬೌಲಿಂಗ್ ಕ್ಲಬ್ , ಥಿಯೇಟರ್ ಗಳು ಅಬ್ಬಬ್ಬಾ!  ಹೇಳಹೊರಟರೆ ಮುಗಿಯುವುದೇ ಇಲ್ಲ ಪಟ್ಟಿ .

                 ಇಲ್ಲಿ ನಾವು ಉಳಿದುಕೊಳ್ಳುವ ರೂಮುಗಳಂತೂ ಸಖತ್ ಮಜವಾಗಿರುವುದು . ಕಾಸಿಗೆ ತಕ್ಕಂತೆ ಗಾರ್ಡನ್‍ವಿಲಾ , ಡೀಲಕ್ಸ್ ಸೂಟ್ , ಓಷನ್ ವ್ಯೂ , ಬಾಲ್ಕನಿಸೂಟ್ , ಸ್ಟೇಟ್ ರೂಮ್ ಹೀಗೆ ವೈವಿಧ್ಯದ ರೂಮುಗಳು ಲಭ್ಯವಿವೆ . ಹೆಚ್ಚುದರದ ರೂಮುಗಳು  ವಿಶಾಲವಾಗಿದ್ದು ಬಾಲ್ಕನಿ ಅಥವಾ ಗಾಜಿನ ಕಿಟಿಕಿ ಇದ್ದು ಹೊರಗಿನ ಸಾಗರಸಂಭ್ರಮವನ್ನು ರೂಮಿನಲ್ಲಿ ಕುಳಿತು, ಮಲಗಿಯೂ ಎಂಜಾಯ್ ಮಾಡಬಹುದು . ಆದರೆ ಕಡಿಮೆದರದ ರೂಮುಗಳಿಗೆ ಈ ಸೌಲಭ್ಯವಿಲ್ಲ . ಈ ರೂಮುಗಳು ಎಂಟಡಿ ಅಗಲ ಹನ್ನೆರಡು ಅಡಿ  ಉದ್ದವಿದ್ದು  ಎರಡುಮಂಚ , ಬಟ್ಟೆಯಿಡುವ ಕಬೋರ್ಡ , ಪುಟ್ಟದಾದ ಬಾತ್‍ರೂಮು -ಟಾಯ್ಲೆಟ್ ಹೊಂದಿರುತ್ತದೆ. ಇಲ್ಲಿ ಕಿಟಿಕಿ ಇರುವುದಿಲ್ಲ .  ಹೊರಗಿನ ಪ್ರಪಂಚದಿಂದ ಪೂರ್ತಿಬೇರೆಯಾದಂತೆ, ಒಂದುರೀತಿ ತಾಯಗರ್ಭದಲ್ಲಿ ಕುಳಿತ ಮಗುವಿನ ಸ್ಥಿತಿಯಂತೆ ಎನ್ನಬಹುದು . ಲೈಟು ಹಚ್ಚಿದರೆ ಮಾತ್ರ ಬೆಳಕು . ಆದರೆ ಇಷ್ಟು ಪುಟ್ಟರೂಮಿನಲ್ಲೂ ಎಲ್ಲ ಸೌಕರ್ಯವೂ ಲಭ್ಯ. ಇವು ಚಕ್ರವ್ಯೂಹದಂತೆ ರಚಿತವಾಗಿರುತ್ತವೆ . ಒಳಗೊಳಗೆ ಫರ್ಲಾಂಗುಗಟ್ಟಳೆ ಉದ್ದುದ್ದ ಕಾರಿಡಾರ್‍ಗಳಲ್ಲಿ  ಹಾಗೊಮ್ಮೆ ಹೀಗೊಮ್ಮೆ ತಿರುಗುತ್ತ ,ಹಾಸಿದ ಸುಂದರ ಕಾರ್ಪೆಟ್ ಮೇಲೆ  ನಡೆದು ರೂಮು ಸೇರಬೇಕು . ಆದರೆ ಇದು ತುಂಬಾನೇ ಚೆನ್ನಾಗಿರುವುದು , ಕಾಲಿನಲ್ಲಿ ಬಲವಿರಬೇಕಷ್ಟೆ . ಇಡೀ ಹಡಗಿನ ಪರಿಚಯ ಮಾಡಿಕೊಂಡು ಒಬ್ಬೊಬ್ಬರೇ ಓಡಾಡುವ ಹಂತಕ್ಕೆಬರಲು ಕನಿಷ್ಟ ಎರಡುದಿನವಾದರೂ ಬೇಕು . 



                ಇಲ್ಲಿ ಹದಿನೈದು ಅಂತಸ್ತುಗಳಿವೆ -ಡೆಕ್- ಎಂದು ಈ ಹಿಂದೆ ಹೇಳಿರುವೆ . ಪ್ರತಿ ಡೆಕ್‍ನಲ್ಲೂ (ಐದನೇ ಡೆಕ್  ನಿಂದ ) ರೂಮುಗಳಲ್ಲದೆ ಎಲ್ಲಡೆಕ್‍ಗಳಿಗೂ ಹೋಗಲು ನಾಲ್ಕು ದೊಡ್ಡದೊಡ್ಡ ಲಿಫ್ಟ್ ಗಳು, ಸ್ಟೇರ್‍ಕೇಸ್‍ಗಳು ಸುಸಜ್ಜಿತ ರೆಸ್ಟ್ ರೂಮು (ಟಾಯ್ಲೆಟ್) ಗಳು ಹಡಗಿನ ಎರಡೂ ಬದಿಯಲ್ಲಿ ಇರುತ್ತವೆ . ಕೆಲವು ಡೆಕ್‍ಗಳು  ಲಾಂಜ್, ರೆಸ್ಟೊರಾಂಟ್, ಬಾರ್, ಥಿಯೇಟರ್, ಜಿಮ್, ಪೂಲ್ ಇತ್ಯಾದಿಗಳಿಗೇ ಮೀಸಲಾಗಿರುತ್ತದೆ. ಟಾಪ್‍ಡೆಕ್‍ನಲ್ಲಿ ದೊಡ್ಡದಾದ ಸ್ವಿಮ್ಮಿಂಗ್‍ಪೂಲ್, ಅದರಾಚೆ ಸುತ್ತಮುತ್ತ ಅಡ್ಡಾಡಿ ಹಡಗುಸಾಗುವ ವೈಭವ , ಸಾಗರದ ಮೇರೆಕಾಣದ ಜಲರಾಶಿ ಸೌಂದರ್ಯ ಸವಿಯಲು ಹೇರಳ ಸುಸಜ್ಜಿತವ್ಯವಸ್ಥೆಗಳಿವೆ. ಮೋಡಮುಚ್ಚದಿದ್ದರೆ ಸೂರ್ಯೋದಯ, ಸೂರ್ಯಾಸ್ತದ ರಂಗಿನ ಬೆಡಗನ್ನು ಮನಸಾರೆ ಅನುಭವಿಸಬಹುದು . ಇನ್ನು, ನಾವು  ನಮ್ಮ ರೂಮಿನಲ್ಲಿಯೇ ಕುಳಿತು , ಮಲಗಿ , ತಿಂದು ಕುಡಿದು ಮಾಡಬೇಕೆನ್ನುವ ಯಾವ ನಿಯಮವೂಇಲ್ಲ . ನೀವು ಇಂತಿಷ್ಟು ಹಣ ಪಾವತಿಸಿ ಒಮ್ಮೆ ಹಡಗುಹೊಕ್ಕಮೇಲೆ ಇಡೀ ಹಡಗು ನಿಮ್ಮದೇ . ಅಂದರೆ ನೂರಾರು ಅಡಿ ಉದ್ದದ ಓಪನ್‍ಡೆಕ್‍ನಲ್ಲಿರುವ ಆರಾಮಸೋಫಾಗಳು , ಲಾಂಜ್ , ಕ್ಲಬ್ , ಕಾರಿಡಾರ್ ಒಟ್ಟಿನಲ್ಲಿ ಎಲ್ಲೇಇರುವ ಕುಷನ್ ಸೋಫಾಗಳಲ್ಲಿ ನೀವು ಕುಳಿತು,ಮಲಗಿ , ಹರಟೆ, ಓದುವುದು , ತಿನ್ನುವುದು , ಏನಾದರೂಮಾಡಿ, ಯಾರೂ ಪ್ರಶ್ನಿಸುವುದಿಲ್ಲ . ಐದರಿಂದ ಮೇಲಿನ ಯಾವುದೇ ಡೆಕ್ಕಿಗೂ ಯಾವಸಮಯದಲ್ಲಿ ಬೇಕಾದರೂ ಹೋಗಿ ಓಡಾಡಿ , ಎಲ್ಲವೂ ನಿಮ್ಮದೇ ಜಾಗ . ಒಮ್ಮೆನಿಮ್ಮ ರೂಮಿನಿಂದ ಹೊರಬಂದರೆ ಮತ್ತೆ ಯಾವ ಕಾರಣಕ್ಕೂ ನೀವಲ್ಲಿ ಹೋಗುವ ಪ್ರಮೇಯವೇ ಬರುವುದಿಲ್ಲ . ತಿನ್ನಲು , ವಿಶ್ರಮಿಸಲು , ಫ್ರೆಶ್ ಆಗಲು , ಟಾಯ್ಲೆಟ್ ಉಪಯೋಗಿಸಲು ಯಾವ ಡೆಕ್ಕನ್ನಾದರೂ ಬಳಸಿಕೊಳ್ಳಬಹುದು . ಯಾವುದೇ ಥಿಯೇಟರ್, ಆಡಿಟೋರಿಯಮ್ , ಕ್ಲಬ್‍ಗಳಲ್ಲಿ ಸಿನಿಮಾ, ಮನರಂಜನೆ , ಲೆಕ್ಚರ್ ಗಳನ್ನು ಯಾವುದೇ ಹೊಸಖರ್ಚಿಲ್ಲದೆ ನೋಡಬಹುದು . ಇನ್ನು ತಿನ್ನಲಂತೂ ನಿಮ್ಮ ಹೊಟ್ಟೆಯಮಿತಿ, ಆರೋಗ್ಯಮಿತಿ ಈ ಎರಡೇ ಕಟ್ಟುಪಾಡು . ಯಾವ ರೆಸ್ಟೋರಾಂಟಿಗೆ ಯಾವ ಸಮಯದಲ್ಲಿ ಬೇಕಾದರೂ ಹೋಗಿ ಏನು ಬೇಕಾದರೂ ತಿನ್ನಿ. ಪ್ರಶ್ನಿಸುವವರು  ಯಾರೂ   ಇರುವುದಿಲ್ಲ . 

                ಇನ್ನು ಮನರಂಜನೆಯ ವಿಷಯಕ್ಕೆ ಬಂದರೆ  ನಾವಿಷ್ಟುಕಾಲ ಕಾಣದ ಎಲ್ಲ ವೈವಿಧ್ಯವನ್ನೂ ಈ ಸಾಗರಮಡಿಲಿನ ಐಷಾರಾಮಿಪಟ್ಟಣದಲ್ಲೇ ಕಾಣಬಹುದು . ಸಿನೆಮಾ, ಹಾಡು , ನೃತ್ಯ, ಆಟ, ಕಲಾಪ್ರದರ್ಶನ , ಸೆಮಿನಾರ್, ಲೆಕ್ಚರ್, ಎಲ್ಲವೂ ಇದೆ . ಆದರೆ ಎಲ್ಲವೂ ಅಂತರ್ರಾಷ್ಟ್ರೀಯಮಟ್ಟದ ಮನರಂಜನೆಗಳಾದ್ದರಿಂದ ಅವರಿಗೆ ಸಹಜವಾದ ರೀತಿಯ ಉನ್ಮತ್ತತೆ , ಬಿಚ್ಚುಡುಗೆಗಳು ಕೆಲವಲ್ಲಿ ಇದ್ದೇ ಇರುವುದು . ಮುಜುಗರಕ್ಕೆ ಇಲ್ಲಿ ಬರುವಾಗಲೇ ಗುಡ್‍ಬೈ ಹೇಳಿಬರುವ ಅನಿವಾರ್ಯತೆ ನಮ್ಮಂಥವರಿಗೆ . ಆದರೆ ಗುಣಮಟ್ಟದ ದೃಷ್ಟಿಯಲ್ಲಿ ಇವು ನಿಜಕ್ಕೂ ಗ್ರೇಟ್ . ಇಲ್ಲಿ ಐಷಾರಾಮಿಯಾಗಿ, ಯಾವುದೇಕಟ್ಟುಪಾಡಿಲ್ಲದೆ ಕಾಲಕಳೆವ ಮನಃಸ್ಥಿತಿಯವರು ಸಾಕಷ್ಟುಮಂದಿ ಬರುವುದರಿಂದ ಎಲ್ಲಕಡೆ ಧಾರಾಳವಾಗಿ ತುಂಡುಡುಗೆಗಳ ವೀನಸ್‍ದೇವತೆಯಂಥ ಹೆಣ್ಣುಗಳು, ಸ್ವಿಮ್ಮಿಂಗ್‍ಪೂಲಿನಲ್ಲಿ ಕಾಲಕಳೆವ  ಹೆಚ್ಚುಕಮ್ಮಿ ಹುಟ್ಟುಡುಗೆಯವರು ಕಂಡುಬರುತ್ತಾರೆ . ಹಾಗಿರುವುದು ಅವರ ಸಂಸ್ಕøತಿಯೂ ಹೌದಾದ್ದರಿಂದ, ನಾವೂ ಇದೆಲ್ಲ ಕಾಮನ್ ಎನ್ನುವಂತೆ ಕೆಲವೊಮ್ಮೆ  ಕಣ್ಣುಮುಚ್ಚಿಯೇ ನಡೆಯಬೇಕು .                      
                
ಆಹಾರವೈವಿಧ್ಯದ ಕಾರ್ಖಾನೆ...... 

        
ನಿಜ, ಈ ವಿಷಯದಲ್ಲಿ ಇದೊಂದು ಕಾರ್ಖಾನೆಯೇ . ಪ್ರಪಂಚದಲ್ಲಿ ಕಾಣುವ ಎಲ್ಲ ವೈವಿಧ್ಯವನ್ನೂ ಇಲ್ಲಿ ಕಾಣಬಹುದು ಮಾತ್ರವಲ್ಲ,  ಬಯಸಿದರೆ ಎಲ್ಲವನ್ನೂ ಸವಿಯುತ್ತ ಎಂಜಾಯ್ ಮಾಡಬಹುದು.   ಬಂದಿರುವುದೇ ಎಂಜಾಯ್‍ಮೆಂಟಿಗೆ ತಾನೆ....!
 ಈ ಕಾರ್ಖಾನೆ ಬಹುಷಃ ಮುಚ್ಚಿದ್ದೇ ನಾನುನೋಡಲಿಲ್ಲ . ಕೆಲವು ರೆಸ್ಟೊರಾಂಟ್‍ಗಳು ಮಧ್ಯರಾತ್ರಿಯ ನಂತರ ಒಂದೆರಡುಮೂರು ಗಂಟೆ ಮುಚ್ಚಬಹುದು , ಆದರೆ , ಹೊರಗಡೆ ಎಲ್ಲಡೆಕ್ಕಿನ ಎಲ್ಲಕಡೆ ಕಂಡುಬರುವ ಕಾಫಿ, ಟೀ , ಜೂಸ್ ಇತ್ಯಾದಿಕೌಂಟರ್‍ಗಳಿಗೆ ಬಂದ್ ಪ್ರಶ್ನೆಯೇ  ಇಲ್ಲ .  ಇವು ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುತ್ತೆ . ಆಧುನಿಕವಾಗಿ ಅಳವಡಿಸಿರುವ ಕಾಫಿಮೇಕರ್‍ಗಳ ಗುಂಡಿ ಅದುಮಿದರೆ ಡಿಕಾಕ್ಷನ್ ಕಪ್‍ಗೆ ಬೀಳುತ್ತದೆ . ಟೀ ಬೇಕಾದರೆ ಇನ್ನೊಂದು ಬಾಕ್ಸ್ ನ ಗುಂಡಿ ಅದುಮಿದರೆ ಕುದಿವನೀರು ಬೀಳುತ್ತದೆ . ಕೆಳಗೆ ಟ್ರೇಗಳಲ್ಲಿರುವ  ಸಕ್ಕರೆ , ಡಿಪ್‍ಟೀ , ಜಗ್‍ನಲ್ಲಿರುವ ಬಿಸಿಹಾಲು ಹಾಕಿ ಅಲ್ಲಿಯೇ ಇಟ್ಟ ಕಡ್ಡಿ ತೆಗೆದು ಕಲಕಿದರೆ ಪಾನೀಯ ರೆಡಿ . ಹಾಗೇ ಹತ್ತಾರು ಬಾಕ್ಸ್ ಗಳಲ್ಲಿ ವಿಧವಿಧ ಜೂಸ್ ರೆಡಿ ಇರುವುದು . ಇಲ್ಲ , ಕುಡಿಯಲು ಹಾಲುಬೇಕೆ...? ಕೇಳಿದರೆ ಸಾಕಷ್ಟುದೊಡ್ಡ ಪಿಂಗಾಣಿ ಜಗ್ಗಿನಲ್ಲಿ ಬಿಸಿಬಿಸಿ ಹಾಲು ತಂದುಕೊಡುತ್ತಾರೆ . ಈಗಮಾತ್ರ ಅಲ್ಲ , ನೀವು ಪ್ರತಿಬಾರಿ ಟೇಬಲ್ ಮುಂದೆಕೂತಾಗಲೂ  'ವಾಂಟ್ ಮಿಲ್ಕ್ '? ಎಂದು ಕೇಳುತ್ತ  ಉಪಚರಿಸುತ್ತಾರೆ .ಇಲ್ಲಿನ ತರಹೇವಾರಿ ಹೋಟೆಲ್‍ಗಳಲ್ಲಿ ಪ್ರಪಂಚದ ಎಲ್ಲೆಡೆಯ ವೈವಿಧ್ಯವೂ ದೊರಕುವುದು .ಇಂಡಿಯಾದ ಚಪಾತಿ,ಪೂರಿ,ಉಪ್ಪಿಟ್ಟು ,ಇಡ್ಲಿ , ಪಲಾವ್, ಬದನೇಕಾಯಿ ಹುಳಿ, ಮಾವಿನುಪ್ಪಿನಕಾಯಿ ಇಂಥವೂ ಸಿಗುವುದು . ಕೆಲವೊಮ್ಮೆ ನಾವು ಇಂಥ ಪದಾರ್ಥ ಬೇಕೆಂದರೆ ಪ್ರಯತ್ನಿಸಿ ಮಾಡಿದ್ದೂ ಉಂಟು . ನಮ್ಮನ್ನು 'ಗೆಸ್ಟ್'ಗಳೆಂದೇ ಪರಿಗಣಿಸಿ ಉಪಚರಿಸಲು ಟೊಂಕಕಟ್ಟಿ ನಿಂತಿರುತ್ತಾರೆ . ಆದರೆ ನಮ್ಮಕೆಲವು ಅಡಿಗೆಗಳ ರುಚಿಮಾತ್ರ ಕೇಳಬೇಡಿ . ಪಾಪ , ನಮ್ಮನ್ನು ತೃಪಿಪಡಿಸಬೇಕೆನ್ನುವ ಅವರ ಕಾಳಜಿಗೆ ಮಾತ್ರ ಬೆಲೆಕಟ್ಟಬೇಕು .
                ಬೆಳಿಗ್ಗೆ  ಐದುಗಂಟೆಗೆಲ್ಲಾ ಬೆಳಗಿನ ತಿಂಡಿ ರೆಡಿ . ಡೈನಿಂಗ್‍ಹಾಲಿಗೆ ಪ್ರವೇಶಿಸುವಾಗ ಸ್ವಾಗತಿಸುವ ಹುಡುಗಿ ಕೈಲೊಂದು ಬಾಟಲಿಹಿಡಿದು , 'ವೆಲ್‍ಕಮ್ ವೆಲ್‍ಕಮ್'  ಹ್ಯಾಪಿ ಹ್ಯಾಪಿ ' ಎಂದು ರಾಗವಾಗಿ ಹೇಳುತ್ತ ನಗುನಗುತ್ತ ಕೈಗೆ 'ಹ್ಯಾಂಡ್ ಸ್ಯಾನಿಟೈಸರ್' ದ್ರವವೊಂದನ್ನು ಸ್ಪ್ರೇ ಮಾಡುತ್ತಾಳೆ . ಬೆಳಗಿಂದ ರಾತ್ರಿಯವರೆಗೂ ಅವಳದ್ದು ಇದೇ ಕೆಲಸ . ಪ್ರತಿಬಾರಿಯೂ ನಾವುಹೀಗೆ ಕೈತೊಳೆದೇ ಒಳಗೆ ಕಾಲಿಡಬೇಕು . 'ಶುಚಿತ್ವವೇ ದೇವರು' ತಾನೆ....?   ಅತಿವಿಶಾಲವಾದ ಈ ಡೈನಿಂಗ್ ಹಾಲಿನಲ್ಲಿ ನಿಮಗೇನು ಬೇಕು .... ಅನೇಕತರಹ ಬ್ರೆಡ್, ಓಟ್ ಗಂಜಿ, ಕಾರ್ನ ಫ್ಲೇಕ್ಸ್, ಕುದಿವಹಾಲು , ಬೆಣ್ಣೆ ,ಜೇನು , ಪೂರಿ ಸಬ್ಜಿ, ಸಲಾಡ್ , ದೋಸೆ , ಕರಿದ,ಹೆಸರು ಗೊತ್ತಿಲ್ಲದ ತಿಂಡಿಗಳು, ಹೆಚ್ಚಿಟ್ಟ- ಇಡಿಯ -ಹತ್ತಾರುಬಗೆಯ ಹಣ್ಣುಗಳು, ಡೆಸರ್ಟಗಳು , ಜೂಸ್, ಐಸ್ ಕ್ರೀಮ್,ಕಾಫಿ ,ಟೀ, ತಿನ್ನುವವರಿಗೆ ಅನೇಕ ತರಹದ ಮಾಂಸಾಹಾರ,  ಓಹ್.....ಪಟ್ಟಿಮಾಡಲು ಖಂಡಿತಾ ಸಾಧ್ಯವಿಲ್ಲ . ಬಿಸಿನೀರಲ್ಲಿ ಶುಚಿಯಾಗಿ ಜೋಡಿಸಿಟ್ಟ ಪಿಂಗಾಣಿತಟ್ಟೆ ತುಂಬಾ ಏನನ್ನುಬೇಕಾಧರೂ, ಎಷ್ಟು ಬೇಕಾದರೂ ತುಂಬಿಸಿ ಇದರಿಂದಾಚೆಯ ವೈಭವೋಪೇತವಾದ ಊಟದಜಾಗದಲ್ಲಿ ಅಂದವಾಗಿ ಜೋಡಿಸಿದ ಟೇಬಲ್ಲಿಗೊಯ್ದು ಕೂತರೆ , ಎದುರಿನ ಪೂರ್ತಿಗಾಜಿನ ಕಿಟಿಕಿಯಿಂದ ಕಾಣುವ ಸಮುದ್ರದ ಅಲೆಗಳ ಏರಿಳಿತ ನೋಡುತ್ತ ತಿನ್ನುವ ಮಜವೇ ಬೇರೆ. ಇಲ್ಲಿ ಶುಭ್ರನ್ಯಾಪ್‍ಕಿನ್‍ಗಳು , ಚಮಚೆ , ಫೋರ್ಕುಎಲ್ಲ ನೀವು ಬಳಸಿಇಡುತ್ತಿದ್ದಂತೆ ಅದನ್ನು ತೆಗೆದು ಬೇರೆ ಶುಭ್ರವಾದದ್ದನ್ನು ತಂದಿಡುತ್ತಲೇ ಇರುತ್ತಾರೆ . ಹೆಚ್ಚಿನವರು ಇಲ್ಲಿ ತಿನ್ನುವ ವೈಖರಿ ನೋಡಬೇಕು , ಒಂದೊಂದಕ್ಕೂ ಒಂದೊಂದು ತಟ್ಟೆ ,ಚಮಚ, ನ್ಯಾಪ್ ಕಿನ್ ಬಳಸಿಬಳಸಿ ಇಡುತ್ತಾರೆ. ಬೇಸರವಿಲ್ಲದೆ ಎಲ್ಲ ಟೇಬಲ್‍ಗಳ ಗಮನಿಸುತ್ತ ಶುಚಿಮಾಡುತ್ತಾರೆ ಈ ಸಿಬ್ಬಂದಿ . ಜೊತೆಗೆ ನಗುನಗುತ್ತ ಮಾತನಾಡಿಸಿ 'ಏನಾದರೂ ಬೇಕೆ' ಎನ್ನುತ್ತ , ಬೇಕಾದರೆ ತಂದುಕೊಡುವ ಅವರಸೇವೆ ನಿಜಕ್ಕೂ ನಮ್ಮನ್ನು ದಂಗುಬಡಿಸುತ್ತೆ . (ಆದರೆ , ಇದೆಲ್ಲಕ್ಕೂ ದುಡ್ಡುಪೀಕಿದ್ದು ನಾವೇ. ಇರಲಿ,)  ಹೀಗೆ ಆರಂಭವಾದ ಈ ಕಾರ್ಯಾಗಾರ ರಾತ್ರಿ ಹನ್ನೆರಡರವರೆಗೂ, ಇಂಥ ವೈವಿಧ್ಯಗಳ  ಜೊತೆ ಅನ್ನ.ಸಾಂಬಾರು ,ಪಲಾವ್ , ನೂರಾರು ತರಹದ ಸ್ವೀಟುಗಳು, ಇನ್ನೂ ನೂರಾರು  ತರಹದ ನಮಗೆ ಪರಿಚಯವಿರದ ಮನಕೆರಳಿಸುವ   ಆಹಾರಪದಾರ್ಥಗಳ   ಅಕ್ಷಯಪಾತ್ರೆಯಾಗಿ ಪ್ರವಾಸಿಗರನ್ನು ಹಿಂಡುಹಿಂಡಾಗಿ ಸೆಳೆಯುತ್ತಲೇ ಇರುತ್ತದೆ . ಇಲ್ಲಿಯ ಸಿಬ್ಬಂದಿಯಲ್ಲಿ ಇಬ್ಬರು ಕನ್ನಡಿಗರೂ ಇದ್ದಿದ್ದು ವಿಶೇಷವಾಗಿತ್ತು .                                                           

ಕಚಗುಳಿಯಿಟ್ಟ ಅನುಭವಗಳು .

             
ಬೆಳಿಗ್ಗೆ ನಾವು ರೂಮಿಂದ ಹೊರಹೋದ ಮೇಲೆ 'ಹೌಸ್ ಕೀಪಿಂಗ್ ' ಅಂದರೆ ರೂಮು  ಕ್ಲೀನ್ ಮಾಡುವ ಸಿಬ್ಬಂದಿ ಬರುತ್ತಾರೆ . ನಾವು ಸಂಜೆ ಬಂದಾಗ ರೂಮು ಝಳಝಳ ಎನ್ನುವಂತಿರುತ್ತೆ , ಇಷ್ಟೇ ಅಲ್ಲ ಹಾಸಿಗೆಯ ಮೇಲೊಂದು ನಾಯಿಯೋ, ಮೊಲವೋ , ಬಾತುಕೋಳಿಯೋ, ತೂಗಾಡುವ ಕಪಿಯೋ   ವಿಶ್ರಮಿಸುತ್ತಿರುತ್ತೆ . ಹ್ಞಾಂ, ಹೆದರುವ ಅಗತ್ಯವಿಲ್ಲ . ಕಾರಣ ಇದು ನಮ್ಮ ರೂಮಿಗಿಡುವ ಬೆಳ್ಳನೆಯ ಟರ್ಕಿಟವೆಲ್‍ನಿಂದ ಆ ಸಿಬ್ಬಂದಿಯ ಕೈಲಿ ರೂಪುಗೊಂಡ ಬೊಂಬೆ . ಲಾಂಜ್‍ನಲ್ಲಿ ಇದನ್ನು ಮಾಡುವುದು ಹೇಗೆಂಬ  ಕಲಾಪ್ರದರ್ಶನದ, ವಿಧಾನದ ಶೋಗಳೂ ನಡೆಯುತ್ತಿರುತ್ತದೆ .ಇದೊಂದು ಹೊಸತಾದ , ಚಂದದ ಕಲಾವೈವಿಧ್ಯವಾಗಿತ್ತು .  


              ಅದೊಂದುಬೆಳಿಗ್ಗೆ  ಹನ್ನೊಂದನೇಡೆಕ್ಕಿನ 'ಫಿಟ್‍ನೆಸ್ ಸೆಂಟರ್' ಗೆ ಹೋಗಿ ಟ್ರೆಡ್‍ಮಿಲ್ಲಿನಲ್ಲಿ ವ್ಯಾಯಾಮ ಮಾಡುತ್ತಿದ್ದೆ . ಮೂವತ್ತಕ್ಕೂ ಹೆಚ್ಚಿನ ಮೆಷೀನುಗಳಿರುವ ಈ ಜಿಮ್ ಪೂರ್ತಿ ಗಾಜಿನ ಆವರಣ ಹೊಂದಿದೆ . ಎಲ್ಲವೂ ಸಾಗರಾಭಿಮುಖವಾಗಿರುವುದರಿಂದ ಇಲ್ಲಿನಿಂತು ಕಸರತ್ತು ಮಾಡುತ್ತಿದ್ದರೆ , ಹಡಗುಸಾಗುವ ವೇಗಕ್ಕೆ ಸಮುದ್ರದ ಹೊಯ್ದಾಟ , ಏರಿಳಿವ ಪುಟ್ಟದೊಡ್ಡ ಅಲೆಗಳ ವೈಯ್ಯಾರ , ಭೂಮಿಕಾಣದ, ನೀರುಆಗಸ ಸೇರುವ ದಿಗಂತದಂಚು , ಅಪಾರ ಜಲರಾಶಿ ಕಣ್ಣೆದುರು ಮಾಯಾಪ್ರಪಂಚವನ್ನೇ ಸೃಷ್ಟಿಸಿತ್ತು . ನಾನೂ ಕಸರತ್ತು ಮಾಡುತ್ತ ಈ ಮತ್ತಿನಲ್ಲಿ ಮೈಮರೆತಿರುವಾಗಲೇ  ಹತ್ತಿರ ಬಂದಿದ್ದ ಅಲ್ಲಿಯ ಟ್ರೈನರ್. ಬಹಳ ವಿನಮ್ರತೆಯಿಂದ , 'ಮ್ಯಾಡಮ್ , ನೀವು  ಸೀರೆ ಹಾಗೂ ಚಪ್ಪಲಿಧರಿಸಿ ಟ್ರೆಡ್‍ಮಿಲ್‍ವರ್ಕ್ ಮಾಡುವುದಕ್ಕೆ ಇಲ್ಲಿ ನಿಷೇದವಿದೆ . ಇದು ನಿಮ್ಮ ರಕ್ಷಣೆಗಾಗಿ ಮಾತ್ರ ' ಎಂದ . ನಿಜ, ವೇಗವಾಗಿ ಓಡುವ ಯಂತ್ರದಮೇಲೆ ಸೀರೆ , ಚಪ್ಪಲಿ ಸಿಕ್ಕಿಕೊಳ್ಳುವ ಸಾಧ್ಯತೆಯಿರುವುದು . ನಾನು ಇಳಿದೆ . "ಮ್ಯಾಮ್ ಸಾರಿ ' ಎಂದ. ಅವನ ಕಾಳಜಿ, ವಿನಯ ಬಹಳ ಇಷ್ಟವಾಯಿತು . ಸರಿ ಎಂದು ಓಪನ್‍ಡೆಕ್ಕಿಗೆ ಬಂದವಳೇ ಅಲ್ಲಿದ್ದ  ಕಾಫಿಕೌಂಟರಿನಿಂದ ಕಾಫಿಬೆರೆಸಿಕೊಂಡು , ಕಾಲುಚಾಚುವ ಸೋಫಾದಲ್ಲಿ ಕುಳಿತೆ . ಸಾಗುವಹಡಗಿನ ವೇಗ , ಹಾದಿಕೊಡುವಂತೆ ಇಭ್ಭಾಗವಾಗುವ ನೀರು,  ಮೇರೆಯಿಲ್ಲದ  ಜಲರಾಶಿ, ಕೊಂಚ ಅಬ್ಬರದಲಿ ಬೀಸುವ ತಣ್ಣನೆಗಾಳಿ , ಕೈಲಿ ಬಿಸಿಬಿಸಿ ಆಹ್ಲಾದಕರವಾದ ಕಾಫೀ ಅಬ್ಬಾ.... ಜೊತೆಗೆ  ಸೂರ್ಯ ಈಗಷ್ಟೇ ನಗುನಗುತ್ತಾ  ಕಣ್ಣುತೆರೆದಿದ್ದರಿಂದ   ಸಾಗರಕನ್ಯೆಯ   ವೈಭವ ಇನ್ನೂ ಮೋಹಕವಾಗಿತ್ತು . ನೀರಮೇಲಣ ಎಳೆಯಕಿರಣಗಳಿಂದಾಗಿ  ಅಲೆಗಳನ್ನು ಬೆಳ್ಳಿಯ ಮೀನುಗಳಂತೆ ,ಹೊನ್ನಿನ ಎಲೆಗಳಂತೆ ಫಳ್ಳೆಂದು ಮಿಂಚಿಸುತ್ತ  ಮತ್ತೇರಿಸಿಯೇ ಬಿಟ್ಟಳು .  ಓಹ್ , ಇದೆಂಥ ಮರುಳುಗೊಳಿಸುವ ಸೌಂದರ್ಯವೆಂದರೆ ...ನಾನು , ನೀರು , ಈ ಹಡಗು ಇದಿಷ್ಟೇ ಸತ್ಯವೆನ್ನಿಸಿಬಿಟ್ಟಿತು . ಈ ಕ್ಷಣ ಅಸೀಮ ಚೆಲುವಿನದಾಗಿತ್ತು ..............................

              ಇಲ್ಲಿ ಏಳನೇಡೆಕ್ಕಿನ ರೆಸೆಪ್ಷನ್ ಜಾಗ ಇಡೀ ಹಡಗಿನ ಆಕರ್ಷಣೆಯಬಿಂದು . ನೆಲದಿಂದ ಛಾವಣಿಯ ಎತ್ತರ ಮೂರುನಾಲ್ಕು ಅಂತಸ್ತಿನಷ್ಟಿದ್ದು  ಇಢೀಜಾಗ ಅತೀವೈಭವದಲ್ಲಿ  ಅಲಂಕರಿಸಲಾಗಿದೆ . ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿ ಹರಟೆಹೊಡೆಯಲು , ಇಲ್ಲಿರುವ ಬೆಲೆಬಾಳುವ ಆಭರಣ , ಕಡಿಮೆಬೆಲೆಯ ಸೇಲ್ ನ ಒಡವೆಗಳು ,ವಾಚು , ಬ್ಯಾಗು ಇತ್ಯಾದಿ ವಸ್ತು ಗಳನ್ನು  ಕೊಳ್ಳಲು ನೆರೆದಿರುತ್ತಾರೆ . ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಫೋಟೋಗ್ರಾಫರ್‍ಗಳಿದ್ದು ಫೋಟೋತೆಗೆಸಿಕೊಳ್ಳುವವರ 'ಪೋಸ್ ' ನೋಡೋದೇ ಒಂದು ಟೈಮ್ ಪಾಸ್. ಇಲ್ಲಿಯೂ ಸಂಗೀತ , ಕುಶಲವಸ್ತುಗಳ ಮಾಡುವ ವಿಧಾನದ ಶೋಗಳಿರುತ್ತದೆ . ಗಾಜಿನಬಾಗಿಲು ತೆರೆದು ಹೊರನಡೆದರೆ ಓಪನ್‍ಡೆಕ್ಕಿನ   ಫರ್ಲಾಂಗಿನುದ್ದದ ಕಾರಿಡಾರ್, ಕಣ್ಣೆದುರು ಹೊಯ್ದಾಡುವ ಸಾಗರ , ಅದರಾಚೆ ಅಲಾಸ್ಕಾದ  ಹಿಮಪರ್ವತಗಳು , ಮಿಲಿಯಗಟ್ಟಳೆ ವರುಷಗಳಿಂದ ಹೆಪ್ಪುಗಟ್ಟಿನಿಂತ ಭಾರೀಗಾತ್ರದ ಗ್ಲೇಸಿಯರ್‍ಗಳು , ನಿಜಕ್ಕೂ ಅದ್ಭುತ , ಮನೋಹರದೃಶ್ಯಗಳನ್ನು ಅತೀ ಸಮೀಪದಲ್ಲೇ ಕಾಣುವಾಗ ನಾವು ಎಲ್ಲಿಯೋ ಕಳೆದುಹೋಗಿದ್ದಂತೂ ಸತ್ಯ .    

              ಒಂದುದಿನ, ಮಧ್ಯಾಹ್ನ ಊಟ ಮಾಡುತ್ತಿದ್ದಾಗ, ಈಗಾಗಲೇ ಪರಿಚಿತಳಾಗಿದ್ದ  ಸ್ಟೂವರ್ಡ್, ರುಮೇನಿಯಾದ ಹುಡುಗಿ 'ಜೆಸೆಂತ' ಬಂದವಳೇ , 'ಈ ರಾತ್ರಿ ಹತ್ತುಗಂಟೆಯ ಒಳಗೆ ಡಿನ್ನರ್ ಮುಗಿಸಿ . ಕಾರಣ , ರಾತ್ರಿ ಚಾಕೋಲೇಟ್ ಪಾರ್ಟಿ ಇದೆ . ಅದಕ್ಕೆ ಹತ್ತರಿಂದ ಹನ್ನೊಂದು ಗಂಟೆಯವರೆಗೆ ಡೈನಿಂಗ್‍ಹಾಲ್ ಮುಚ್ಚುತ್ತಾರೆ . ನೀವು ಎಂದೂ ಕಂಡಿರದ ನೂರಾರು ತರಹದ ಚಾಕೋಲೇಟ್ ಕಾಣಲಿದ್ದೀರಿ ಮತ್ತು ಎಷ್ಟುಬೇಕಿದ್ದರೂ ತಿನ್ನಬಹುದು . ಸ್ಟಾಫ್ ಇಂದ ಹಾಡು ನೃತ್ಯಕೂಡ ಇರುವುದು' ಎಂದಳು . ಈಥರ ಹೊಟ್ಟೆಬಿರಿಯ ತಿಂದಮೇಲೆ ಯಾರಿಗಾದರೂ ಮತ್ತೆ  ತಿನ್ನೋಕಾಗತ್ತಾ .. ಯಾರೂ ಬರಲಾರರು ಎಂದುಕೊಂಡೆ . ಆದರೂ,  'ತಿನ್ನದಿದ್ದರೇನಾಯ್ತು , ಹೇಗಿರುತ್ತೆ ಎನ್ನೋದನ್ನಾದರೂ ಕಣ್ಣಿಂದ ನೋಡೋಣವೆಂದು ಹನ್ನೊಂದುಗಂಟೆಗೆ ಹೋದರೆ ಓಹ್...ಲಿಫ್ಟಿನಿಂದ ಹೊರಬರಲು  ಜಾಗವಿಲ್ಲದಷ್ಟು ಜನರ ಕ್ಯೂ, ಕಾರಿಡಾರ್ , ಮೆಟ್ಟಿಲಿಂದ ಹಾದು ಅದೆಷ್ಟೋ ದೂರದವರೆಗೂ ಇತ್ತು . ನಾವು ಸಾಲಿಗೆ ನಿಲ್ಲದೆ ದೂರದಲ್ಲಿ ನಿಂತೆವು  ವೀಕ್ಷಕರಾಗಿ . ಸರಿಯಾಗಿ ಹನ್ನೊಂದಕ್ಕೆ ಬಾಗಿಲು ತೆರೆಯಿತು .  'ನಮ್ಮ ದೇಶದವರೇ ಅಶಿಸ್ತಿನವರು , ತಿನ್ನಲು ಹಾತೊರೆಯುವವರು ವಿದೇಶೀಯರು ಹಾಗಲ್ಲ ' ಎಂಬ ನಮ್ಮವರ ನಂಬಿಕೆಗೆ ವಿರುಧ್ಧವಾಗಿ ಅಲ್ಲಿ ನಿಂತಿದ್ದವರು , ಹಾಗೂ ಬಾಗಿಲು ತೆರೆಯುತ್ತಿದ್ದಂತೆ ಯದ್ವಾತದ್ವಾ ನುಗ್ಗಿದವರು ವಿದೇಶೀಯರೇ . ನಮ್ಮ ಮೇಲಿನ ದೂರು ಪೊಳ್ಳೆಂದು ಸಾಬೀತಾಗಿದ್ದಕ್ಕೆ ನನಗೆ ಖುಷಿಯಾಯಿತು . ಅಬ್ಬಾ ! ಅಲ್ಲಿದ್ದ ಚಾಕೋಲೇಟ್ ವೈವಿಧ್ಯ ಮಾತ್ರ ಹಿಂದೆ ಕಂಡಿಲ್ಲ ಮತ್ತೆ ಕಾಣುವುದೂ ಕಷ್ಟವೇನೋ . ಮೂರುನಾಲ್ಕು ತಟ್ಟೆಗಳಲ್ಲಿ ಪೇರಿಸಿ ಪೇರಿಸಿ ಕೊಂಡೊಯ್ಯುವವರ 'ಸ್ವೀಟ್ ಟೂತ್ ' ಬಗ್ಗೆ ಆಶ್ಚರ್ಯವೂ , ಅದರ ತಯ್ಯಾರಿಕೆ -ಕಲಾತ್ಮಕವಾಗಿ ಜೋಡಿಸಿರುವ ಆ ಸ್ಟಾಫ್ ನ ಶ್ರಮದಬಗ್ಗೆ  ಖುಶಿಯೂ ಆಯಿತು . ಹಡಗಿನ ಮತ್ತೊಂದು ವಿಶಿಷ್ಟ ಮನರಂಜನಾ ಪಾರ್ಟಿ ಕಂಡ ಅನುಭವ ನನಗಾಗಿದ್ದಕ್ಕೆ ರೋಮಾಂಚನವೂ ಆಯಿತು .

              ಮೊದಲು, ಈ ಯಾನಕ್ಕೆ ಹಡಗುಹತ್ತುವ ವೇಳೆ ಆ ವೈಭವದಲ್ಲಿ ಬೇರೇನೂ ಆಲೋಚನೆ ಕಾಡದಿದ್ದರೂ , ರಾತ್ರಿ ತಾಯಗರ್ಭಕ್ಕೆ ಮರಳಿದಂಥ ಆ ಒಳಗೊಳಗಿನ ರೂಮಿನಲ್ಲಿ ದೀಪಆರಿಸಿ ಮಲಗಿದಾಗ ಮತ್ತೆ 'ಟೈಟಾನಿಕ್ ' ಸಿನಿಮಾ ನೆನಪಾಯಿತು .  ನಿಜಕ್ಕೂ ಇಲ್ಲಿಯ ಅನುಭವ ಹೇಗಿತ್ತು ನೋಡಿ .! ಹೊರಗೆ ಮನ ಹುಚ್ಚೆಬ್ಬಿಸಿದ್ದ ಸಾಗರದ ಅಲೆಗಳ ಹೊಯ್ದಾಟ ಈಗ ಯಾಕೋ ಭಯ ಹುಟ್ಟಿಸಿಬಿಟ್ಟಿತು.  ಪೊಟ್ಟಣದಲ್ಲಿದ್ದಂತೆ ಇದ್ದರೂ ಹಡಗು ಸಾಗುವವೇಗ , ನೀರವ ರಾತ್ರಿಯಲ್ಲಿನ  ನೀರಿನ ಮೊರೆತ , ಅಲೆಗಳ ಹೊಯ್ದಾಟ ಸ್ಪಷ್ಟವಾಗಿ ತಿಳಿಯುತ್ತಿತ್ತು . ಅಲೆಏರಿದಾಗ ಅದರೊಡನೆ ಹಡಗು ಏರುವುದು , ಅಲೆಕೆಳಬಂದಾಗ ಅದರೊಡನೆ ಹಡಗೂ ಕೆಳಗಿಳಿಯುವುದು . ಇದು ಸಹಜ . ಆದರೆ ಇಳಿಯುವಾಗಿನ ಅನುಭವ....! ಹಡಗು ನೀರಿನೊಳಗೆ , ಆಳಕ್ಕೆ , ಇನ್ನೂ ಆಳಕ್ಕೆ ಇಳಿಯುತ್ತಿರುವಂತೆ ... ಪೂರ್ತಿ ಸಾಗರಗರ್ಭಕ್ಕೇ ಇಳಿಯುವಂತೆ , ಮತ್ತೆ ಮೇಲೆ ಬರಲಾರದೇನೋ.. 
ಎಂಬಂತೆ ನಡುಕ ಹುಟ್ಟಿಸಿಬಿಟ್ಟಿತು.  ನೀರುಜೀವಜಲ , ಆದರೆ ಮುನಿದರೆ....!  ....ಹೌದೇ ಹೌದು, ಪ್ರಕೃತಿಯ ಮುಂದೆ ಮನುಜ ಹುಲ್ಲುಕಡ್ಡಿಯೇ ಸರಿ .



             ಆದರೆ , ಈ ಭಯವೆಲ್ಲ ನಿರಾಧಾರ ಬಿಡಿ . ಈ ಪಯಣ ಅತ್ಯಧ್ಭುತ. ಮರೆಯಲಾರದ ರೋಮಾಂಚಿತ ಅನುಭವ . ನಾವುಕಳೆದ ಎಂಟುದಿನ , ಅಲ್ಲಿನ ವೈಭವ, ಅವರ ಉಪಚಾರ, {ನಮ್ಮಜೇಬು ಹಗುರ ಮಾಡಿಕೊಂಡರೆ ಮಾತ್ರ ) ನಮ್ಮ ಬದುಕಿನಹಾಳೆಯ ಮತ್ತೆಮತ್ತೆ  ಮಗುಚಿಹಾಕುತ್ತಾ ಓದಬಹುದಾದ ಸುಂದರಪುಟಗಳು . ಭೂಮಿಯ ಸಂಪರ್ಕವೇ ಇರದ ನೀರಿನಮೇಲಿನ ಈ ಕೃತಕನಗರಿಯ ಅನುಭವ ಬದುಕಿನಲ್ಲಿ ಒಮ್ಮೆಯಾದರೂ ಸಂದರ್ಭಸಿಕ್ಕರೆ ಅನುಭವಿಸಬೇಕು . ಆದರೆ,  ಇದು ಕೇವಲ ಒಂದು ಝಲಕ್ ಅಷ್ಟೇ . ತಂಬಿಗೆಯಲ್ಲಿ ತುಂಬಿ ಸಾಗರದ ನೀರು ಅಳೆಯಲಾದೀತೇ.......ಹಾಗೆ ಈಹಡಗಿನ ಅಧ್ಭುತಗಳ ಬಗ್ಗೆ ಪೂರ್ಣವಿಚಾರ ಬರೆಯುವ ತಾಕತ್ತೂ ನನ್ನದಲ್ಲ . ನನ್ನ ಅನುಭವಕ್ಕೆ ಸಿಕ್ಕಷ್ಟು ನಿಮಗೆ ....  
                  ಇಷ್ಟೆಲ್ಲಾ ಹೇಳಿದಮೇಲೆ ಇನ್ನೊಂದು ಸತ್ಯವನ್ನೂ ಹೇಳಿಬಿಡುತ್ತೇನೆ . ಎಂಟನೇದಿನಕ್ಕೆ ಬೇಸರವಾಗಿದ್ದೂ ನಿಜ . ನೀರೇನೋ ನೋಡಿದಷ್ಟೂ ತಣಿಸುತ್ತದೆ , ಆದರೆ , ಅದೇ ಹಸಿಬಿಸಿ ಬಿಚ್ಚಾಟದ ದೃಶ್ಯ, ಅದೇ ನೂರಾರು ತರಹದ ಊಟತಿಂಡಿ , ಅದೇ ವೈಭವ , ತಿರುತಿರುಗಿ ಅಲ್ಲಲ್ಲೇ ಗುರಿಯಿಲ್ಲದ   ಸುತ್ತಾಟ, ಕೆಲಸವಿಲ್ಲದೆ ಕಳೆಯುವಕಾಲ  ಯಾಕೋ ನನ್ನೂರಿನ ಜನ , ಅನ್ನ- ಖಾರದ ಬೇಳೆಸಾರು  ನೆನಪಾಯಿತು . ಹೌದು , ಎಲ್ಲೇ ಸುತ್ತಿದರೂ ಕೊನೆಗೆ 'ನಮ್ಮೂರೇ ಚಂದ ನಮ್ಮವ್ರೇ ಅಂದ , ಕನ್ನಡಭಾಷೆ ಕರ್ಣಾನಂದ ' ಎನ್ನೋದು ನಿಜವೇ ತಾನೇ.........ಈ ಪ್ರವಾಸಗಳು  ಬದುಕಿನ ಏಕತಾನತೆಗೆ   ಪರಿಣಾಮಕಾರಿ     ಮದ್ದು . ದುಡ್ಡಿದ್ದರೆ    ಅತ್ಯಗತ್ಯ .         ನಾಲ್ಕುದಿನಕ್ಕೆ  
ಚಂದವೋಚಂದ ಅಷ್ಟೆ .
                                         *              *

ಗುರುವಾರ, ಮಾರ್ಚ್ 19, 2015

ಚೈತ್ರ ಸಂಭ್ರಮ

            ಚೈತ್ರ ಸಂಭ್ರಮ 
       
            ಚೈತ್ರಚೆಲುವ  ಯುಗದ ಆದಿ ಬಂದಿದೇ ,
            ಶುಭಮುನ್ನುಡಿ   ಹೊಸ್ತಿಲಲಿ  ಬರೆದಿದೆ .... 


        ಮಾವು ಬೇವಿಗಷ್ಟು ಹಸಿರ ತುಂಬಿದೇ 
           ಹೊಂಗೆಯಲ್ಲಿ   ಹೂವಮಾಲೆ  ಇಳಿಸಿದೇ 
        ಭೃಂಗ ಸಂಗಕೆಳಸುವಂತೆ   ಕೆಣಕಿದೇ 
             ಕೋಗಿಲೆಗೆ 'ಕುಹೂ 'ದನಿ ನೀಡಿದೆ ........


       ಬಾಗಿಲಿಗೆ ತಳಿತೋರಣ ಕಟ್ಟಿದೇ   
       ಎದೆಗುಡಿಸಿ  ರಂಗವಲ್ಲಿ  ಬರೆದಿದೇ 
             'ಪ್ರೀತಿ ಬಿತ್ತಿ ಪ್ರೀತಿ ಬೆಳೆಸು' ಗುನುಗಿದೇ  
                 ಎದೆಯಲಿರಲಿ ಮನುಜತನ ಎಂದಿದೆ ....... 



           ಹಳತನೆಲ್ಲ  ಮರೆಯಬೇಕು  ಪಿಸುಗಿದೇ 
               ಹೊಸಸಂಭ್ರಮ ಹೊಸೆಯಿರೆಂದು ಕರೆದಿದೇ 
           'ಸಿಹಿ-ಕಹಿ ಸಮಚಿತ್ತ ತತ್ವ'  ಸಾರಿದೇ   
                     ವರುಷವರುಷ  ಬೆಳೆಯಿರೆಂದು  ಹರಸಿದೆ ....... 
                                   

ನನ್ನೀ  ಕವಿತೆಯೊಂದಿಗೆ  ಎಲ್ಲರಿಗೂ ಹಬ್ಬದ  ಶುಭ ಹಾರೈಸುತ್ತ  ಬ್ಲಾಗ್ ನಲ್ಲಿ  ಮುಂದಡಿಯಿಡುತ್ತಿರುವೆ.....   

-ಎಸ್ .ಪಿ. ವಿಜಯಲಕ್ಷ್ಮಿ 


                    -

ಬುಧವಾರ, ಮಾರ್ಚ್ 18, 2015

"ಬ್ಲಾಗಿಲು" ತೆರೆದಿರುವೆ


ಎಲ್ಲರಿಗೂ ನಮಸ್ಕಾರ .....
                  ಇಷ್ಟುಕಾಲ ಬ್ಲಾಗ್ ನ ಬಾಗಿಲ ಹಿಂದೆ ನಿಂತು ಕುತೂಹಲದಿಂದ  , ಅಕ್ಕರೆಯಿಂದ ಬರಹಗಳನ್ನು ಓದುತ್ತಿದ್ದ ನನಗೆ ನನ್ನ ಬರಹಗಳಿಗೂ ಬ್ಲಾಗೊಂದು ಬೇಕೆನ್ನಿಸುವ ತುಡಿತ ಹುಟ್ಟಿದ್ದೇ ಕಾರಣ , 'ಮಾಗಿಮಲ್ಲೆ 'ಯ ಬ್ಲಾಗಿಲು ತೆರೆದಿರುವೆ . ನನಗೆ ಏನನ್ನಾದರೂ ಕೊಡುವ ಆಸೆಯೂ , ಹಾಗೆ ಎಲ್ಲರ ಬರಹದ ಚಂದಗಳನ್ನು ಸ್ವೀಕರಿಸುವ ಆಸೆಯೂ ಇದೆ . ಮಲೆನಾಡಿನಿಂದ ಬಂದ ನನಗೆ ಅಲ್ಲಿಯ ಮುಗ್ಧ , ಮಾಸದ , ಹಸಿರ ಸೌಂದರ್ಯ ನಿರಂತರ ಕಾಡುವ ಕನಸು . ಮಾಗಿಕಾಲದ ಚುಮುಚುಮು ನಸುಕಿನಲ್ಲಿ ಮನೆಯ ಹಿಂದಣ ಅಂಗಳಕ್ಕೆ ದುಡುದುಡನೆ ಓಡುತ್ತಿದ್ದದ್ದು 'ಮಾಗಿಮಲ್ಲೆಯ ' ತೀರದ ಆಸೆಯಿಂದಲೇ . ಅಕ್ಕಪಕ್ಕದ ಅತಿಯಾಶೆಯ ಹೆಂಗಳೆಯರು ನನ್ನ  ಮಲ್ಲಿಗೆಯನ್ನೆಲ್ಲಾ ಕೊಯ್ದೇಬಿಟ್ಟಿರುವರಾ....? ಓಡುವ ಬಾಲೆಯ ಎದೆಯಲ್ಲಿನ  ಅಂದಿನ ಈ ಆತಂಕ ಈಗ ನಗೆ ಹುಟ್ಟಿಸುತ್ತದೆ . ನಿಜ , ವಯೋಮಾನಕ್ಕೆ ತಕ್ಕಂತೆ ಆತಂಕಗಳಿರುವುದು ಸೃಷ್ಟಿಧರ್ಮ .   

           ಇರಲಿ , ಗಿಡದಲ್ಲಿ ಅರಳಿರುತ್ತಿದ್ದ ಹೂಗಳು ಸಾಸಿರದ ಸಂಖ್ಯೆಯಲ್ಲಿ . ಹಸಿರೆಲೆಗಳ ನಡುವೆ ಬೆಳ್ಳಗೆ , ನವಿರು ಕಂಪ ಬೀರುತ್ತ ನನ್ನ ಸೆಳೆಯುತ್ತಿದ್ದವು . ಗಿಡದ ಕೆಳಗೆ ನಿಂತು , ಒಂದೇ ಒಂದು ಹೂವಿನ ತೊಟ್ಟು ಹಿಡಿದು ಸೆಳೆಯಹೊರಟರೆ  ಸಾಕು , ಒಹ್ ...!ತಪತಪನೆ ಮೈಮೇಲೆ ಸುರಿಯುತ್ತಿತ್ತು ಗಿಡದ ತುಂಬಾ ಆವರಿಸಿ ಮುತ್ತಿಡುತ್ತಿದ್ದ ಮಾಗಿ ಇಬ್ಬನಿಯ ಹನಿಗಳು . ಅಬ್ಬಬ್ಬಾ ... ಮೊದಲೇ ಮಾಗಿಕಾಲದ ನಡುಗಿಸುವ ಚಳಿ , ಜೊತೆಗೆ, ಹಿಮನೀರು ಸುರಿದಂತೆ ಇಬ್ಬನಿಯ  ತಬ್ಬುವಿಕೆ. ನಿಂತಲ್ಲೇ ಮರಗಟ್ಟಿದ ಅನುಭವವಾಗುತ್ತಿತ್ತು . 'ಅದೇನೇ ಈ ಚಳಿಯಲ್ಲಿ ನಿನ್ನ ಹುಡುಗಾಟ,  ಚಳಿ ದಂಡ  ಆಗುತ್ತೆ  ನೋಡು ,  ಬಿಸ್ಲು  ಬರುತನ್ಕ  ಕಾಯಕ್ಕಾಗಲ್ವಾ  ' ಅಪ್ಪ ಅಮ್ಮ ಪ್ರೀತಿಯಿಂದ ಬೈಯುತ್ತಿದ್ದರು . ಕಸು ತುಂಬಿದ್ದ ಬಾಲ್ಯದ ಮೈಮನಸ್ಸಿಗೆ ಇವೆಲ್ಲ ತಟ್ಟುತ್ತಿರಲಿಲ್ಲ . ಒಂದೊಂದೇ ಹೂಕಿತ್ತು ಉದ್ದನೆಯ ಲಂಗವನ್ನು ತುಸು ಮೇಲೆತ್ತಿ ಬುಟ್ಟಿಯಂತೆ ಬಾಗಿಸಿ , ತುಂಬುತ್ತಿದ್ದೆ , ಬೆಳ್ಳನೆಯ ನೂರಾರು ಹೂಗಳನ್ನು.... ಗಿಡವನ್ನೆಲ್ಲ  ಬರಿದಾಗಿಸುತ್ತಿದ್ದ ನನಗೆ , ಆ ತಾಯಮಡಿಲಲ್ಲಷ್ಟು ಹೂ ಉಳಿಸಿ ಅವಳ ಅಂದವನ್ನು ಕಂಗಳಿಂದ ಹೀರಿದರೆ ಸಾಕೆಂಬ ಪ್ರಜ್ಞೆ ಇರಲಿಲ್ಲ ..
             ಇಂದೂ ಈ ಚಿತ್ರಣ  ನನ್ನೆದೆಯಲ್ಲಿ ಮಾಸದ ಚೆಲುವಾಗಿಯೇ  ನಗುತ್ತಿದೆ . ಕಾಲಘಟ್ಟ ಇಂದು ನನ್ನನ್ನು ಬಹಳದೂರ ಕರೆತಂದಿದೆ . ಇಂದು ಮನೆಯಲ್ಲಿ ಅಂದಿನಂಥ ಅಂಗಳವಿಲ್ಲ . 'ಮಾಗಿಮಲ್ಲೆಯ ' ಗಿಡವಿಲ್ಲ . ಕೊಯ್ದು ನನ್ನ ಸೆರಗಿಗೆ ತುಂಬಲು ಹೂವಿಲ್ಲ . ಹೂವಿನ ಸ್ಪರ್ಶದ ಇಬ್ಬನಿಯ ಸೇಚನವಿಲ್ಲ . ಎಲ್ಲವೂ  ಅಧುನಿಕ ಸ್ಪರ್ಶದ ನಯಗಾರಿಕೆಯ ಬದುಕು . ಅದಕ್ಕಾಗಿ ಬೇಸರವೂ ಇಲ್ಲ. . ಬದುಕು ನಿಂತ ನೀರಲ್ಲವಲ್ಲ.... .! ಹರಿಯುತ್ತೆ ಹಾದಿ ಸಿಕ್ಕಂತೆ . ಈಗ ಬರಹವನ್ನು ಎದೆಗಪ್ಪಿಕೊಂದಿರುವೆ , ಒಂದೊಂದು ಬರವಣಿಗೆಯೂ ಅಂದು ಮಡಿಲ ತುಂಬುತ್ತಿದ್ದ 'ಮಾಗಿಮಲ್ಲೆ ' ಹೂವನ್ನು ನೆನಪಿಸುತ್ತದೆ . ಪ್ರಕಟಗೊಂಡಾಗ ಲಂಗದ ಬುಟ್ಟಿಗೆ 'ಹೂವೊಂದು '  ಬಂದುಬಿದ್ದಂತೆ , ಇಬ್ಬನಿಯ ತಂಪು ಸೇಚನವಾದಂತೆ ದೇಹ , ಮನಸ್ಸು ನವಿರಾಗಿ  ಕಂಪಿಸುತ್ತೆ ..... ಸಾಕಲ್ಲ ಇಷ್ಟು,  ಬರವಣಿಗೆಯ ಬಿಡದ ನಂಟಿಗೆ .  
             ಹೆಜ್ಜೆಯಿಟ್ಟಿರುವೆ . ಆ ನೆನಪು ನಿರಂತರವೆಂದು ಬ್ಲಾಗಿಗೆ 'ಮಾಗಿಮಲ್ಲೆ ' ಎಂದೇ ಹೆಸರಿಟ್ಟಿರುವೆ .
                                                            ಎಸ್ .ಪಿ. ವಿಜಯಲಕ್ಷ್ಮಿ